Author: ನಮ್ರತಾ ಶೆಟ್ಟಿ

  • ಗೀತಾ

    ಕಾರು ಮನೆ ಮುಂದೆ ಬಂದು ನಿಂತಿತು. ಕಾರಿನಿಂದ ಪ್ರಶಾಂತ್ ತನ್ನ ಡ್ರೈವರ್ ಸಹಾಯದಿಂದ ಇಳಿದ. ವರ್ಷ ೭೦ ದಾಟಿತ್ತು, ಹಾಗಾಗಿ ಮಂಡಿ ಕೀಲು ಸವೆದು, ನಡೆಯುವುದು ಕಷ್ಟವಾಗಿತ್ತು. ಮನೆಯ ಎದುರು ಗೀತಾಳ ಸ್ನೇಹಿತರು ನಿಂತಿದ್ದರು. ಪ್ರಶಾಂತ್ನನ್ನು ನೋಡಿ ಅವರಲ್ಲೊಬ್ಬ “ಇದ್ದಾಗ ಕಾಣಲಿಲ್ಲ, ಹೋದ ಮೇಲೆ ಹೆಣ ನೋಡಲು ಬಂದಿದ್ದಾನೆ ನೋಡು” ಎಂದು ಕೊಂಚ ಪ್ರಶಾಂತನಿಗೆ ಕೇಳುವಂತೆಯೇ ಆಡಿಕೊಂಡ. ಪ್ರಶಾಂತ್ ಕಿವಿಗೆ ಚೆನ್ನಾಗಿಯೇ ಬಡಿಯಿತು, ಆದರೆ ಅವರು ಆಡಿದ ಮಾತು ತಪ್ಪೆನ್ನಿಸಲಿಲ್ಲ. ತನ್ನ ಹೆಂಡತಿ ಗೀತಾಳನ್ನು ನೋಡಲು ಊರುಗೋಲಿನ ಸಹಾಯದಿಂದ ಬೇಗ ಬೇಗ ಮನೆ ಒಳಗೆ ನಡೆದ. ಕೋಣೆಯಲ್ಲಿ ಗೀತಾಳ ಹೆಣ ಮಲಗಿಸಿದ್ದರು. ಮಗ ಮತ್ತು ಮಗಳು ತಾಯಿ ಪಕ್ಕದಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮೊಮ್ಮಕ್ಕಳದ್ದು ಇನ್ನು ಚಿಕ್ಕ ವಯಸ್ಸು. ಕೋಣೆ ಮೂಲೆಯಲ್ಲಿ ಮೂಕವಿಸ್ಮಿತರಾಗಿ ಕುಳಿತಿದ್ದವು. ಪ್ರಶಾಂತ್ ಕೋಣೆ ಒಳಗೆ ಬಂದವನೇ ಗೀತಾಳ ಬಳಿ ಬಂದು ದುಃಖ ಎಷ್ಟು ಬಿಗಿ ಹಿಡಿದು ಕೂತರೂ, ಕಟ್ಟೆ ಒಡೆದ ನೀರಂತೆ ಜೋರಾಗಿ ಹರಿಯತೊಡಗಿತು.

    ಇತ್ತ ಮಗ, ಅಪ್ಪನ ಬಳಿ ಬಂದು, “ಸತ್ತ ಮೇಲೂ ನೀನು ಅವಳ ಮುಖ ನೋಡಲು ಬರುವುದು ಅಮ್ಮನಿಗೆ ಇಷ್ಟವಿರಲಿಲ್ಲ, ಆದರೂ ಹೇಗೋ ವಿಷಯ ತಿಳಿದು ಬಂದಿದ್ದೀಯಾ. ಆದಷ್ಟು ಬೇಗ ಹೊರಡು ಮುಂದಿನ ಕಾರ್ಯ ಮಾಡಬೇಕಾಗಿದೆ ” ಎಂದ. ಸ್ವಂತ ಮಗನ ಬಾಯಿಯಿಂದ ಈ ಮಾತುಗಳನ್ನು ಕೇಳಿ, ನಾನಿನ್ನೂ ಯಾರಿಗಾಗಿ ಬದುಕಿದ್ದೇನೆ ಈ ಭೂಮಿಯ ಮೇಲೆ ಎಂಬ ಪ್ರಶ್ನೆ ಪ್ರಶಾಂತನಿಗೆ ಮತ್ತೆ ಮನದಾಳದಿಂದ ಕೇಳಿಸಿತು.

    ಬದುಕಿದ್ದಾಗ ಗೀತಾಳ ಯಾವ ಕಷ್ಟದಲ್ಲೂ ಕೈ ಹಿಡಿಯದ ಪ್ರಶಾಂತ್ ಸತ್ತ ಹೆಣದ ಕೈ ಹಿಡಿದು “ನನ್ನ ಕ್ಷಮಿಸು ಗೀತಾ ” ಎಂದು ಒಮ್ಮೆ ಜೋರಾಗಿ ಅತ್ತು ಕೋಣೆಯಿಂದ ಹೊರನಡೆದ. ಅಲ್ಲೇ ಹಾಲ್ ನಲ್ಲಿ ಇದ್ದ ಗೀತಾಳ ಚಿಕ್ಕ ಭಾವಚಿತ್ರ ಪ್ರಶಾಂತ್ ಕಣ್ಣಿಗೆ ಬಿತ್ತು. ಭಾವಚಿತ್ರ ಹಿಡಿದು ಪಶ್ಚಾತಾಪ, ದುಃಖ ಎಲ್ಲಾ ಭಾವಗಳನ್ನು ಹೊತ್ತು ಹೊರನೆಡೆದು ಕಾರನ್ನೇರಿದ. ಗೀತಾಳ ಭಾವಚಿತ್ರ ಹಿಡಿದು ಕಾರಿನಲ್ಲಿ ಕೂತ ಪ್ರಶಾಂತ್, ತನ್ನ ಕಳೆದು ಹೋದ ಜೀವನದ ನೆನಪುಗಳಲ್ಲಿ ಮುಳುಗಿದ.

    ಪ್ರಶಾಂತ್ ನೀಲಕಂಠ ರಾವ್ ಅವರ ಒಬ್ಬನೇ ಮಗ, ಹುಟ್ಟಿಂದ ಎಲ್ಲಾ ಅನುಕೂಲವನ್ನೂ ಹೊಂದಿದ್ದ. ನೀಲಕಂಠ ರಾವ್ ಅವರದ್ದು ಬಹುದೊಡ್ಡ ಗಾರ್ಮೆಂಟ್ ಇತ್ತು. ಮಗ ನಮ್ಮ ಗಾರ್ಮೆಂಟ್ ನೋಡಿಕೊಂಡರೆ ಸಾಕು, ಅವನೇನು ಡಾಕ್ಟರ್, ಇಂಜಿನಿಯರ್ ಆಗಬೇಕಾಗಿಲ್ಲ ಎಂದು ಅವರು ಯಾವಾಗಲೂ ಅಂದುಕೊಳ್ಳುತ್ತಿದ್ದರು. ಹಾಗೆಯೇ ನೀಲಕಂಠ ರಾವ್ ಅವರು ಬಹಳ ಸರಳ ವ್ಯಕ್ತಿ. ಗಾರ್ಮೆಂಟಿನ ಎಲ್ಲಾ ಕೆಲಸಗಾರರನ್ನೂ ತನ್ನ ಮನೆಯವರಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮಗ ಪ್ರಶಾಂತನಿಗೆ ಈ ಗಾರ್ಮೆಂಟಿನಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಸದಾ ಅವನಿಗೆ ಸಾಹಿತ್ಯ, ಕಥೆ ಬರೆಯುವುದು, ಸಿನಿಮಾ ಮಾಡಬೇಕು ಇದೇ ಯೋಚನೆ. ನೀಲಕಂಠ ರಾವ್ ಮಗನ ಆಸೆಗೆ ಎಂದೂ ಬೇಡವೆನ್ನಲಿಲ್ಲ. ಬದಲಿಗೆ ತಾನೇ ಹಣ ಹೂಡಿಕೆ ಮಾಡಿ ಮಗನಿಗೆ ತನ್ನ ಮೊದಲ ಚಲನಚಿತ್ರ ಮಾಡಲು ಪ್ರೋತ್ಸಾಹಿಸಿದರು. ಹೀಗೆ ಪ್ರಶಾಂತ್ ಬಣ್ಣದ ಜಗತ್ತಿಗೆ ಕಾಲಿರಿಸಿದ.

    ಪ್ರತಿಭಾನ್ವಿತನಾಗಿದ್ದ ಪ್ರಶಾಂತನನ್ನು ಬಣ್ಣದ ಲೋಕ ಬಹುಬೇಗ ಯಶಸ್ಸಿನ ಉತ್ತುಂಗಕ್ಕೆರಿಸಿತು. ಬಣ್ಣದ ಬದುಕು ಪ್ರಶಾಂತನನ್ನು ಸಂಪೂರ್ಣ ಬದಲಾಯಿಸಿತು. ಬೇರೆ ಮನೆ ಮಾಡಿ ತಾನು ಹೆಚ್ಚಾಗಿ ಒಂಟಿಯಾಗಿ ಬದುಕಲು ಆರಂಭಿಸಿದ. ಆಗಾಗ ತಿಂಗಳಿಗೊಮ್ಮೆ ಅಪ್ಪನನ್ನು ಮಾತನಾಡಿಸಲು ಬರುತ್ತಿದ್ದ. ನೀಲಕಂಠ ರಾವ್ ಅವರಿಗೆ ಮಗನದೇ ಚಿಂತೆ. ಇದ್ದ ಒಬ್ಬ ಮಗ ಕೈ ತಪ್ಪಿ ಹೋಗುತ್ತಿದ್ದಾನಲ್ಲ ಎಂದು.

    ಇತ್ತ ಗೀತಾ ತಂದೆ ತಾಯಿ ಇಲ್ಲದ, ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ. MBA ಪದವೀಧರೆಯಾಗಿದ್ದು, ನೀಲಕಂಠ ರಾವ್ ಅವರ ಗಾರ್ಮೆಂಟ್ ನಲ್ಲಿ ಕೆಲಸಮಾಡುತ್ತಿದ್ದಳು. ಗೀತಾ ಬಹಳ ಸರಳ, ಸುಂದರ ಮತ್ತು ಮುಗ್ದ ಹುಡುಗಿ. ನೀಲಕಂಠನ್ ರಾವ್ ಅವರಿಗೆ ಗೀತಾಳ ನಡೆ ನುಡಿ ಕೆಲಸದ ವೈಖರಿ ತುಂಬಾ ಇಷ್ಟ. ಅವಳನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಒಂದು ದಿನ ಹೀಗೆ ಆಫೀಸ್ನಲ್ಲಿ ಕುಳಿತು ಮಗನ ಬಗ್ಗೆ ದೀರ್ಘ ಆಲೋಚನೆಯಲ್ಲಿ ಮುಳುಗಿದ್ದಾಗ, ಅದೇ ಸಮಯದಲ್ಲಿ ಗೀತಾ ಚೇಂಬರ್ ಒಳಗೆ ಬರಲು ಅನುಮತಿ ಕೇಳುತ್ತಾಳೆ. ಮಗನ ಆಲೋಚನೆಯಲ್ಲಿದ್ದ ನೀಲಕಂಠ ರಾವ್ಗೆ ತಕ್ಷಣ ಗೀತಾ ದೇವತೆಯಂತೆ ಕಂಡಳು. ಅದೇಕೋ ಏನೋ ಅವರಿಗೆ ಮರುಕ್ಷಣವೇ ಗೀತಾಳೇ ನನ್ನನ್ನು ಈ ಚಿಂತೆಯಿಂದ ದೂರ ಮಾಡಬಲ್ಲವಳು ಎಂದೆನಿಸಿತು. ತಡ ಮಾಡದೆ ಗೀತಾಳನ್ನು ಒಳಗೆ ಕರೆದು ಕೂರಿಸಿ, “ಗೀತಾ ನಿನ್ನಲ್ಲಿ ಒಂದು ವಿಚಾರ ಮಾತಾಡಬೇಕು” ಎಂದು ಮಾತು ಶುರು ಮಾಡಿದರು. “ನೀನು ನನ್ನ ಮಗನನ್ನು ಮದುವೆಯಾಗಿ ನನ್ನ ಮನೆ ಬೆಳಗುವೆಯಾ? ದಯವಿಟ್ಟು ನಿರಾಕರಿಸದಿರು” ಎಂದು ಕೇಳಿಕೊಂಡರು. ಎಂದೂ ಈ ದಿಕ್ಕಿನಲ್ಲಿ ಯೋಚಿಸದ ಗೀತಾಳಿಗೆ ಅದೇನು ಉತ್ತರ ನೀಡಬೇಕೆಂದು ಅರಿಯಲಿಲ್ಲ. ಸ್ವಲ್ಪ ಹೊತ್ತು ತಟಸ್ಥಳಾಗಿ ಕುಳಿತಳು. “ಸರ್ ನಂಗೆ ಒಂದಿಷ್ಟು ಸಮಯ ಕೊಡಿ ಯೋಚಿಸಿ ನನ್ನ ನಿರ್ಧಾರ ತಿಳಿಸುತ್ತೇನೆ” ಎಂದು ಅಲ್ಲಿಂದ ನಿರ್ಗಮಿಸಿದಳು.

    ಆಶ್ರಮಕ್ಕೆ ವಾಪಾಸಾದ ಗೀತಾ ನೀಲಕಂಠ ರಾವ್ ಅವರು ಆಡಿದ ಮಾತುಗಳನ್ನೇ ಯೋಚಿಸುತ್ತಾ ಕುಳಿತಳು. ಒಬ್ಬ ಆಫೀಸ್ನಲ್ಲಿ ಕೆಲಸ ಮಾಡುವ ಸಾಮಾನ್ಯ ವರ್ಕರ್ ತರಹ ಎಂದೂ ನೊಡದೆ, ನನಗೆ ಎಲ್ಲಾ ಕೆಲಸದ ಸ್ವಾತಂತ್ರ್ಯ ಮತ್ತು ಸಹಾಯ ಮಾಡಿದ, ನನ್ನನ್ನು ಮಗಳಂತೆ ನೋಡಿಕೊಂಡ ನೀಲಕಂಠ ರಾವ್ ಅವರ ಮಾತನ್ನು ನಾನು ಹೇಗೆ ನಿರಾಕರಿಸಲಿ? ಅವರು ನನ್ನ ಪಾಲಿನ ದೇವರು ಹಾಗೂ ಅದೇನೇ ನಿರ್ಧಾರ ಮಾಡಿದ್ದರೂ ಅದು ನನ್ನ ಜೀವನಕ್ಕೆ ಸರಿಯಾಗಿಯೇ ಮಾಡಿರುತ್ತಾರೆ. ನಾನು ಯೋಚಿಸುವ ಅಗತ್ಯವೇ ಇಲ್ಲ ಎಂದು, ಮರುದಿನವೇ ತನ್ನ ತೀರ್ಮಾನವನ್ನು ನೀಲಕಂಠ ರಾವ್ ಅವರಿಗೆ ತಿಳಿಸುತ್ತಾಳೆ. ಇದನ್ನು ಕೇಳಿ ಅವರ ಖುಷಿಗೆ ಪಾರವೇ ಇರಲಿಲ್ಲ.

    ಅದೇ ದಿನ ಮನೆಗೆ ಬಂದವರೇ ಮಗನೊಂದಿಗೆ ಮದುವೆಯ ಪ್ರಸ್ತಾಪವನ್ನು ಇಟ್ಟರು. ಆದರೆ ತನ್ನದೇ ಚಿತ್ರ ಜಗತ್ತಿನ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಪ್ರಶಾಂತನಿಗೆ ಇಷ್ಟು ಬೇಗ ಮದುವೆಯಾಗುವುದು ಇಷ್ಟವಿರಲಿಲ್ಲ. ಹಾಗಾಗಿ ತಂದೆಯ ಮಾತಿಗೆ ಸಮ್ಮತಿ ಸೂಚಿಸಲಿಲ್ಲ. ಆದರೆ ಬೆಂಬಿಡದ ನೀಲಕಂಠ ರಾವ್ ಮಗನನ್ನು ಪದೇ ಪದೇ ಮದುವೆಗೆ ಒತ್ತಾಯಿಸುತ್ತಿದ್ದರು. ತಿಂಗಳಿಗೊಮ್ಮೆಯಾದರು ಮನೆಗೆ ಬರುತಿದ್ದ ಪ್ರಶಾಂತ್, ಅದನ್ನೂ ನಿಲ್ಲಿಸಿದ. ನೀಲಕಂಠ ರಾವ್ ಅವರ ಆರೋಗ್ಯವೂ ಹದಗೆಡಲು ಶುರುವಾಯಿತು. ಅದೊಂದು ದಿನ ಹಾಸಿಗೆಯಲ್ಲಿ ಮಲಗಿದ್ದ ನೀಲಕಂಠ ರಾವ್ ಮಗನಲ್ಲಿ “ನಾನು ಸಾಯುವ ಮುನ್ನ ನನ್ನದೊಂದು ಆಸೆ ಈಡೇರಿಸು. ನೀನು ನಮ್ಮ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವ ಗೀತಾಳನ್ನು ಮದುವೆ ಆಗಲೇ ಬೇಕು, ಇದು ನನ್ನ ಕೊನೆಯ ಆಸೆ” ಎಂದು ಬೇಡಿಕೊಂಡರು. ಆ ಸ್ಥಿತಿಯಲ್ಲಿದ್ದ ತಂದೆಯ ಆಸೆಯನ್ನು ಅಲ್ಲಗಳೆಯಲು ಪ್ರಶಾಂತನಿಗೆ ಸಾಧ್ಯವಾಗದೆ, ಒಪ್ಪಿಗೆ ಸೂಚಿಸಿದ.

    ಕೆಲವೇ ದಿನಗಳಲ್ಲಿ ನೀಲಕಂಠ ರಾವ್ ಅವರ ಅನಾರೋಗ್ಯದ ಕಾರಣ ಬಹಳ ಸರಳವಾಗಿ ಮದುವೆ ಕಾರ್ಯವನ್ನು ನೆರವೇರಿಸಿದರು. ಸೊಸೆಯಾಗಿ ಬಂದ ಗೀತಾ, ಮಗಳಂತೆ ಮಾವನ ಆರೋಗ್ಯದ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ನೀಲಕಂಠ ರಾವ್ ಅವರ ಆತ್ಮಕ್ಕೆ ತ್ರಪ್ತಿಯಾಯಿತು ಎಂದೆನಿಸುತ್ತದೆ. ಮದುವೆ ಆದ ಕೆಲ ದಿನಗಳಲ್ಲಿ ನೀಲಕಂಠ ರಾವ್ ಅವರು ಮಗನ ಸಂಪೂರ್ಣ ಜವಾಬ್ದಾರಿಯನ್ನು ಗೀತಾಳಿಗೆ ವಹಿಸಿ ಇಹಲೋಕ ತ್ಯಜಿಸಿದರು.

    ವರ್ಷ ತುಂಬುವುದರೊಳಗೆ ಗೀತಾ ಗರ್ಭಿಣಿಯಾದಳು. ಗರ್ಭಿಣಿಯಾದ ಗೀತಾಳಿಗೆ ಅದೆಷ್ಟೋ ಬಯಕೆಗಳಿದ್ದರೂ ತೀರಿಸಲು ತವರಿರಲಿಲ್ಲ. ಗಂಡನ ಮನೆಯಲ್ಲಿಯೂ ಯಾರೂ ಇರಲಿಲ್ಲ. ಅದೇ ಸಮಯದಲ್ಲಿ ಔಟ್ ಓಫ್ ಕಂಟ್ರಿ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಪ್ರಶಾಂತ್ ಒಂದು ಫೋನ್ ಕೂಡ ಮಾಡಿ ವಿಚಾರಿಸ್ತಾ ಇರಲಿಲ್ಲ. ಸದಾ ಶೂಟಿಂಗ್, ಅದು, ಇದು ಅಂತ ಬ್ಯುಸಿ ಇರುತ್ತಿದ್ದ ಪ್ರಶಾಂತನಿಗೆ ಮನೆ ಕಡೆ ಯೋಚನೆಯೂ ಮಾಡುತ್ತಿರಲಿಲ್ಲ. ಅವಳ ಬಯಕೆಯ ಬುತ್ತಿ ಕಣ್ಣೀರ ಧಾರೆಯಲ್ಲೇ ಕೊಚ್ಚಿ ಹೋಗುತ್ತಿತ್ತು. ಗೀತಾಳಿಗೆ ತನ್ನ ಯಾವ ಕಷ್ಟವನ್ನೂ ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆ ಕ್ಷಣಕ್ಕೆ ಅವಳಿಗೆ ಪ್ರಶಾಂತ್ ಜೊತೆಗಿನ ತನ್ನ ಮದುವೆಯ ಅವಸರದ ನಿರ್ಧಾರದ ಬಗ್ಗೆ ಮರುಕವಾರಂಭವಾಯಿತು. ಆದರೆ ಯಾವ ಆಲೋಚನೆಗೂ ಮೀರದಷ್ಟು ದೂರ ತಾನು ಹೆಜ್ಜೆ ಇಟ್ಟಾಗಿದೆ ಎಂದು ಎಲ್ಲವನ್ನು ಹುದುಗಿರಿಸಿ ಸುಮ್ಮನಾಗಿದ್ದಳು.

    ಅಂದು ಗೀತಾಳ ಹೆರಿಗೆಯ ದಿನ. ಎಲ್ಲಾ ಹೆಣ್ಣು ಮಕ್ಕಳಂತೆ ಗೀತಾಳಿಗೂ, ತನ್ನ ಗಂಡ ಹೆರಿಗೆಯ ಸಮಯದಲ್ಲಿ ತನ್ನೋಂದಿಗೆ ಇರಬೇಕು ಎಂಬ ಬಹು ದೊಡ್ಡ ಆಸೆ ಇತ್ತು. ಆದರೆ ಅದೂ‌ ಕೂಡ ಸಾಧ್ಯವಾಗಲಿಲ್ಲ. ಅವಳಿ ಮಕ್ಕಳಿಗೆ ತಾಯಿಯಾದಳು. ಒಂದು ಗಂಡು, ಒಂದು ಹೆಣ್ಣು ಮಗು ಗೀತಾ ಮಡಿಲು ಸೇರಿತು. ಪ್ರಶಾಂತನನ್ನು ಆವರಿಸಿದ್ದ ಬಣ್ಣದ ಜಗತ್ತಿನ ಮಾಯೆ, ಮುದ್ದಾದ ಮಕ್ಕಳೊಂದಿಗೂ ಸಮಯ ಕಳೆಯದಂತೆ ಮಾಡಿತ್ತು. ಇತ್ತ ಗಂಡನಿಗೆ, ಹೆಂಡತಿ ಮಕ್ಕಳ ಮೇಲೆ ಪ್ರೀತಿ ಇಲ್ಲದೇ ಇರುವುದು ಬಹು ದೊಡ್ಡ ನೋವಾದರೂ, ಮುದ್ದಾದ ಮಕ್ಕಳ ನಗು ಎಲ್ಲವನ್ನೂ ಮರೆಸುತ್ತಿತ್ತು. ಅದೇಷ್ಟೋ ಬಾರಿ, ನಾನೇಕೆ ಬರಿಯ ಆಶ್ರಯಕ್ಕೆ ಇಲ್ಲಿರುವೆ ಎಂದು ಅನ್ನಿಸಿದ್ದುಂಟು. ಆದರೆ ಮಕ್ಕಳಿಗೆ ಮುಂದೆ ತಂದೆಯ ಕೊರತೆಯಾಗಬಾರದು ಎಂದು, ಎಲ್ಲಾ ನೋವನ್ನು ಬಚ್ಚಿಟ್ಟು ದಿನ ಕಳೆಯುತ್ತಿದ್ದಳು.

    ಒಮ್ಮೆ ಪ್ರಶಾಂತ್ ನಿರ್ದೇಶನದ “ಮಹಾ ತಾಯಿ” ಚಿತ್ರಕ್ಕೆ, ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿ ಮುಡಿಗೇರಿತು. ಇದರಿಂದ ಪ್ರಶಾಂತನ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಅದೊಂದು ಸ್ತ್ರೀ ಪ್ರಧಾನವಾದ ಚಿತ್ರವಾದ್ದರಿಂದ ಇನ್ನಷ್ಟು ಮಹಿಳಾ ಅಭಿಮಾನಿಗಳು ಹೆಚ್ಚಾದರು. ಇದೇ ಖುಷಿಯಲ್ಲಿ, ಪ್ರಶಸ್ತಿ ಸಿಕ್ಕ ಸಂಭ್ರಮಕ್ಕೆ ಒಂದು ದೊಡ್ಡ ಸಂತೋಷ ಕೂಟವನ್ನು ಏರ್ಪಡಿಸಿ, ಚಿತ್ರೋದ್ಯಮದ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಆಹ್ವಾನಿಸಿದನು. ಆದರೆ ಮನೆಯಲ್ಲೇ ಇದ್ದ ಹೆಂಡತಿಗೆ ಆಹ್ವಾನವಿರಲಿಲ್ಲ. ಪ್ರಶಾಂತನಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದ್ದು ಗೀತಾಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆಯೇ ಸಂತೋಷ ಕೂಟವನ್ನು ಆಯೋಜಿಸಿದ್ದ ಬಗ್ಗೆ ಬೇರೆ ಮೂಲಗಳಿಂದ ತಿಳಿಯಿತು.

    ಗಂಡನಿಗೆ ಸರ್ಪ್ರೈಸ್ ಕೊಡಬೇಕೆಂದು ನಿರ್ಧರಿಸಿ, ಆ ಸಮಾರಂಭದ ದಿನ ಯಾರಿಗೂ ಹೇಳದೆ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದಳು. ಆ ಹೊತ್ತಿಗೆ ಅರ್ಧದಷ್ಟು ಕಾರ್ಯಕ್ರಮ ಮುಗಿದಿತ್ತು. ಎಲ್ಲರೂ ತಿನ್ನುವುದು, ಕುಡಿಯುವುದು, ಮಾತನಾಡುವುದರಲ್ಲಿ ಮುಳುಗಿದ್ದರು. ಬಹಳಷ್ಟು ಜನ ಪ್ರಶಾಂತನಿಗೆ congratulate ಮಾಡುತ್ತಿದ್ದರು. ಅದನ್ನು ದೂರದಿಂದಲೇ ನೋಡಿ ಖುಷಿ ಪಟ್ಟಳು. ಹಾಗೆಯೇ ಮಕ್ಕಳಿಗೂ ಅಪ್ಪನ ಸಾಧನೆಯ ಬಗ್ಗೆ ವಿವರಿಸುತ್ತಿದ್ದಳು. ಪ್ರಶಾಂತ್ ಸುತ್ತುವರಿದ್ದಿದ್ದ ಜನ ತುಸು ಕಡಿಮೆಯಾದ ಬಳಿಕ ಪ್ರಶಾಂತ್ ಮುಂದೆ ಹೋಗಿ ನಿಂತಳು. ಪ್ರಶಾಂತನಿಗೆ ನಾನು ಮತ್ತು ಮಕ್ಕಳು ಇಲ್ಲಿ ಬಂದಿರುವುದು ಬಹಳ ದೊಡ್ಡ ಸರ್ಪ್ರೈಸ್ ಆಗಬಹುದು, ಕಂಡೊಡನೆ ನಮ್ಮನ್ನು ಪ್ರೀತಿಯಿಂದ ಆಲಿಂಗಿಸಬಹುದು ಎಂದೆಲ್ಲಾ ಕಲ್ಪನೆಯಿಂದ ಹೋದ ಗೀತಾಳಿಗೆ ದೊಡ್ಡ ಆಘಾತ ಕಾದಿತ್ತು.

    ಗೀತಾಳನ್ನು ಕಂಡೊಡನೆ ಪ್ರಶಾಂತನಿಗೆ ಶಾಕ್ ಆಯ್ತು. ಕೂಡಲೇ ಅವಳ ಕೈ ಹಿಡಿದು ತುಸು ದೂರ ಕರೆದುಕೊಂಡು ಹೋಗಿ “ನನ್ನ ಅನುಮತಿ ಕೇಳಿದೆ ಇಲ್ಲಿ ತನಕ ಹೇಗೆ ಬಂದೆ? ನೀನು ಇಲ್ಲಿಗೆ ಬಂದಿರುವುದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ ” ಎಂದಾಗ, ಗೀತಾಳ ಮನಸ್ಸು ಮುರಿಯಿತು. ಎಂದೂ ಗಂಡನಿಗೆ ಎದುರು ಮಾತನಾಡದ ಗೀತಾ ಅಂದು ಬಾಯಿ ಬಿಟ್ಟು ತನ್ನೆಲ್ಲ ನೋವನ್ನು ಹೇಳಿಕೊಂಡಳು. “ನಾನು ಮತ್ತು ನನ್ನ ಮಕ್ಕಳು ಅದೇನು ಪಾಪ ಮಾಡಿದ್ದೇವೆ? ನಾವ್ಯಾಕೆ ನಿಮ್ಮ ಖುಷಿಯಲ್ಲಿ ಭಾಗಿಯಾಗಬಾರದು? ಗಂಡನ ಸಂಭ್ರಮದಲ್ಲಿ ಹೆಂಡತಿ ಭಾಗಿಯಾಗಲು ಅದಾವ ಅನುಮತಿ? ” ಎಂದು ಒಂದೇ ಸಮನೆ ಜೋರಾಗಿ ತನ್ನ ಪ್ರಶ್ನೆಗಳ ಸುರಿಮಳೆ ಸುರಿಸಿದಳು. ಮಧ್ಯದ ನಶೆಯಲ್ಲಿದ್ದ ಪ್ರಶಾಂತನಿಗೆ ಹೆಂಡತಿಯ ಎದುರು ನುಡಿಗಳು ಸಹಿಸಲಾಗಲಿಲ್ಲ. ಅತೀವ ಸಿಟ್ಟಿನ ಭರದಲ್ಲಿ ಅದೊಂದು ದೊಡ್ಡ ಸಮಾರಂಭ, ಸಾವಿರಾರು ಜನರಿದ್ದಾರೆ ಇದೆಲ್ಲ ಮರೆತು ಹೆಂಡತಿಯ ಕೆನ್ನೆಗೆ ಒಂದು ಏಟು ಹೊಡೆದೇ ಬಿಟ್ಟ. ಅಲ್ಲೇ ಹತ್ತಿರದಲ್ಲಿದ್ದ ಕೆಲವು ಮಾಧ್ಯಮ ಮಿತ್ರರು, ಚಿತ್ರರಂಗದವರ ಕಣ್ಣಿಗೆ ಇದು ಬೀಳದೇ ಇರಲಿಲ್ಲ.

    ಇಷ್ಟು ವರ್ಷಗಳ ಕಾಲದ ಒಂಟಿತನ, ಪ್ರೀತಿಯ ಮಾತಿನ ಕೊರತೆ, ಬಸುರಿಯ ಬಯಕೆಯನ್ನೆಲ್ಲಾ ಮುಚ್ಚಿಟ್ಟ ಗೀತಾಳಿಗೆ ಈ ಅವಮಾನ ಸಹಿಸಲಾಗಲಿಲ್ಲ. ಮರುಕ್ಷಣವೇ, ಮರುಮಾತಾಡದೇ ತನ್ನ ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮದಿಂದ ಕಣ್ಣೀರ ಕೋಡಿಯೊಂದಿಗೆ ಹೊರ ನಡೆದಳು. ಅಂದು ಅಳುತ್ತಾ ಹೊರಟ‌ ಗೀತಾ, ಅಂದೇ ಕೊನೆ, ಮತ್ತೆಂದೂ, ಎಂತಹ ಸಂದರ್ಭದಲ್ಲೂ ಗೀತಾ ಕಣ್ಣಿಂದ ಒಂದು ಹನಿ ಕಣ್ಣೀರು ಬರಲಿಲ್ಲ. ಅಂದೇ ಅವಳು ನಿರ್ಧರಿಸಿದಳು, ಯಾವ ಭಾವನಾತ್ಮಕ ಸಂಬಂಧವಿಲ್ಲದ, ಒಂದಿಷ್ಟು ಪ್ರೀತಿ ತೋರದ, ಒಮ್ಮೆಯೂ ಗಂಡನಾಗಿ ಅಥವಾ ತಂದೆಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸದ ಪ್ರಶಾಂತ್ ನನ್ನ ಪಾಲಿಗೆ ಇನ್ನಿಲ್ಲ ಎಂದು. ನನ್ನ ವಿದ್ಯೆ ನನ್ನೊಂದಿಗಿದೆ. ಇನ್ನು ಮುಂದೆ ನನ್ನ ಮಕ್ಕಳಿಗೆ ನಾನೇ ತಂದೆ, ತಾಯಿ ಇಬ್ಬರ ಸ್ಥಾನದಲ್ಲಿ ನಿಂತು ಬೆಳೆಸುತ್ತೇನೆ ಎಂದು, ಧೃಡ ನಿರ್ಧಾರ ಮಾಡಿ, ಬೆಂಡಾದ ಬೆರಳುಗಳಿಗೆ ಶಕ್ತಿ ತುಂಬಿ, ಬೆಂಗಾವಲಾಗಿ ಸದಾ ನಿಲ್ಲುವ ಭರವಸೆಯೊಂದಿಗೆ ಮಕ್ಕಳ ಕೈ ಹಿಡಿದು ಅಂದು ಹೊರಟ ಗೀತಾ ಎಂದೂ ಹಿಂದೆ ತಿರುಗಿ ನೋಡಲೇ ಇಲ್ಲ.

    ಇತ್ತ ಪ್ರಶಾಂತ್ ಹೆಂಡತಿಗೆ ಹೊಡೆದ ಸುದ್ದಿ ಮಾಧ್ಯಮದ ಮುಖಾಂತರ ಎಲ್ಲರನ್ನು ತಲುಪಿತು. ಬರೇ ಸಿನಿಮಾದಲ್ಲಿ ಸ್ತ್ರೀ ಶಕ್ತಿ, ಸ್ತ್ರೀ ಎಂದರೆ ದೇವತೆ ಎಂದೆಲ್ಲಾ ತೋರಿಸುವ ಪ್ರಶಾಂತ್ ಮನೆಯಲ್ಲಿ ತನ್ನ ಹೆಂಡತಿಯನ್ನೇ ಗೌರವಿಸದ ಮೇಲೆ ಅವನ ಅದಾವ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬೆಲೆಯಿಲ್ಲ ಎಂದು ಅವನ ಅಭಿಮಾನಿಗಳು ಛೀಮಾರಿ ಹಾಕಿದರು. ಹಾಗೆಯೇ ಅದಾದ ಬಳಿಕ ಮುನಿಸಿಕೊಂಡ ಪ್ರೇಕ್ಷಕರು ಅವನ ಮುಂದಿನ ಯಾವ ಸಿನಿಮಾವನ್ನೂ ಕೈ ಹಿಡಿಯಲಿಲ್ಲ. ಸಿನಿಮಾವನ್ನೇ ಉಸಿರು ಅಂದುಕೊಂಡ ಪ್ರಶಾಂತನಿಗೆ ಸಾಲು ಸಾಲು ಸೋಲು, ಮಾನಸಿಕವಾಗಿ ಕುಗ್ಗುವಂತೆ ಮಾಡಿತು. ಸಿನಿಮಾರಂಗದಿಂದ ಒಂದು ಮಟ್ಟಿಗೆ ಶಾಶ್ವತವಾಗಿಯೇ ಹೊರ ಬಂದ.

    ದಿನ ಕಳೆದಂತೆ ಒಂಟಿತನ ಪ್ರಶಾಂತನನ್ನು ಬಹಳಷ್ಟು ಕಾಡಲಾರಂಭಿಸಿತು. ಎಷ್ಟು ದೊಡ್ಡ ಮನೆ, ಎಷ್ಟು ಹಣ, ಏನೇ ಇದ್ದರೂ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಗೀತಾ ಮತ್ತು ಮಕ್ಕಳ ನೆನಪು ದಿನೇ ದಿನೇ ಹೆಚ್ಚು ಹೆಚ್ಚು ಕಾಡಲಾರಂಭಿಸಿತು. ಬಹಳಷ್ಟು ಖಿನ್ನತೆಗೆ ಒಳಗಾದ ಪ್ರಶಾಂತ್ ಇನ್ನು ಒಂಟಿತನ ನನ್ನಿಂದಾಗದು ಕೊನೆಯ ದಿನಗಳನ್ನಾದರೂ ಹೆಂಡತಿ ಮಕ್ಕಳೊಂದಿಗೆ ಕಳೆಯಲು ನಿರ್ಧರಿಸಿದ. ಹಾಗೆಯೇ ತನ್ನ ಅಹಂನ್ನೆಲ್ಲಾ ಬಿಟ್ಟು, ಪರಿಚಯದವರ ಸಹಾಯದಿಂದ ಗೀತಾಳ ವಿಳಾಸ ಹುಡುಕಿ ಕೂಡಲೇ ಅದೇ ದಿನ ಗೀತಾ ಹಾಗೂ ಮಕ್ಕಳನ್ನು ಭೇಟಿಯಾಗಲು ಹೋದ. ಗೀತಾ ಮತ್ತು ಮಕ್ಕಳು ತನ್ನನ್ನು ಪ್ರೀತಿಯಿಂದ ಸ್ವಾಗತಿಸಬಹುದು ಎಂದು ಬಹುದೊಡ್ಡ ನಿರೀಕ್ಷೆಯಲ್ಲಿ ಹೊರಟ ಪ್ರಶಾಂತನಿಗೆ ನಿರಾಸೆಯ ಸುದ್ದಿ ಕಾದಿತ್ತು. ಪ್ರಶಾಂತನನ್ನು ನೋಡಿದ ಗೀತಾಳ ಮುಖದಲ್ಲಿ ಒಂದಿಷ್ಟೂ ಭಾವ ಬದಲಾಗಲಿಲ್ಲ. ಬದಲಿಗೆ, ಯಾರು ನೀವು? ನಿಮ್ಮ ಪರಿಚಯ ನನಗಿಲ್ಲ, ಪರಿಚಯ ಕೇಳುವಷ್ಟು ಬಿಡುವಿಲ್ಲ ಎಂದು ಬಾಗಿಲು ತೆರೆದ ವೇಗದಲ್ಲೇ, ಪ್ರಶಾಂತ್ ಬಾಯಿ ತೆರೆಯುವ ಮುಂಚೆಯೇ ಗೀತಾ ಬಾಗಿಲು ಮುಚ್ಚಿದಳು.

    ತನ್ನ ತಪ್ಪನ್ನು ಅರಿತ ಪ್ರಶಾಂತನಿಗೆ, ಕ್ಷಮೆ ಕೇಳಲೂ ಸಾಧ್ಯವಾಗಲಿಲ್ಲ ಎಂಬ ನೋವಿನಲ್ಲಿ ವಾಪಾಸಾದ. ಮನೆಗೆ ಬಂದ ಮೇಲೆ ಮತ್ತದೇ ಒಂಟಿತನ, ಮತ್ತದೇ ನೆಮ್ಮದಿ ರಹಿತ ಬದುಕು. ಇದರಿಂದ ಆರೋಗ್ಯ ದಿನೇ ದಿನೇ ಹದಗೆಡುತ್ತಾ ಹೋಯಿತು. ಅದೆಷ್ಟೋ ಬಾರಿ ಗೀತಾಳ ಭೇಟಿಯಾಗಲು ಮನಸ್ಸು ಹಾತೊರೆದರೂ, ಅವಳ ನೆಮ್ಮದಿಯನ್ನು ಹಾಳು ಮಾಡಲು ನನಗೆ ಅಧಿಕಾರವಿಲ್ಲ ಎಂದು ಸುಮ್ಮನಾಗುತ್ತಿದ್ದ.

    ಹೀಗೆ ವರ್ಷಗಳು ಉರುಳಿತು. ಇತ್ತ ಮಕ್ಕಳನ್ನೆಲ್ಲ ದಡ ಸೇರಿಸಿದ ಗೀತಾ, ಮಕ್ಕಳು, ಮೊಮ್ಮಕ್ಕಳನ್ನೆಲ್ಲಾ ಕಣ್ ತುಂಬಾ ಕಂಡು ಆನಂದಿಸಿ ತೃಪ್ತಳಾಗಿದ್ದಳು. ಒಂದು ರಾತ್ರಿ ಚೆನ್ನಾಗಿಯೇ ಊಟ ಮಾಡಿ ಮಲಗಿದ್ದ ಗೀತಾ ಬೆಳಿಗ್ಗೆ ಏಳಲೇ ಇಲ್ಲ.

    ಗೀತಾಳ ಅಂತಿಮ ದರ್ಶನ ಮಾಡಿ, ಹಳೆಯ ನೆನಪುಗಳ ಹೊಳೆ ಯಲ್ಲಿ ಹೊರಟ ಪ್ರಶಾಂತನ ಕಾರು ಅವನ ಮನೆ ಬಳಿ ಬಂದು ನಿಂತಿತು. ಡ್ರೈವರ್, “ಸರ್, ಮನೆ ಬಂತು” ಎಂದ. ಪ್ರಶಾಂತನಿಂದ ಯಾವ ಪ್ರತ್ಯುತ್ತರ ಬರಲಿಲ್ಲ. ಕಾರಿನ ಹಿಂದುಗಡೆ ಬಾಗಿಲು ತೆರೆದು,”ಸರ್ ಮನೆ ಬಂತು ಕೈ ಕೊಡಿ” ಎಂದು ಡ್ರೈವರ್ ಕೈ ಮುಂದೆ ಮಾಡಿದ. ಆದರೆ ಪ್ರಶಾಂತ್ ಕೈ ನೀಡಲಿಲ್ಲ. ಕೈಯಲ್ಲಿ ಎದೆಗೊತ್ತಿಕೊಂಡ ಗೀತಾಳ ಚಿತ್ರ ಹಾಗೆಯೇ ಇತ್ತು. ಉಸಿರು ನಿಂತಿತ್ತು.

  • ಕೆಂಪಂಗಿ

    ಬಡತನದ ಸವಾಲುಗಳೊಂದಿಗೆ ಪುಟ್ಟ ಮಗಳ ಕನಸಿನ ಕೆಂಪಂಗಿಯೊಂದಿಗಿನ ಪಯಣ.

    ಅಮ್ಮಾ.. ನಂಗೊಂದು ರೇಷ್ಮೆ ಕೆಂಪಂಗಿ ಕೊಡಸ್ತೀಯಾ?” ಎಂದು ರೂಪಾ, ಸರೋಜಾಳನ್ನು ಕೇಳಿದಳು. ಮಗಳ ಪ್ರಶ್ನೆಗೆ ಉತ್ತರಿಸಲಾಗದೆ, ಕೇಳಿಯೂ ಕೇಳದಂತೆ ತನ್ನ ಕೆಲಸದಲ್ಲಿ ತೊಡಗಿಕೊಂಡಳು. ಆದರೆ ಹಠ ಬಿಡದ ರೂಪಾ ಮತ್ತೆ “ಅಮ್ಮಾ.. ನಿನ್ನನ್ನೇ ಕೇಳ್ತೀರೊದು, ನನಗೊಂದು ಚೆಂದದ ರೇಷ್ಮೆಯ ಕೆಂಪಂಗಿ ಬೇಕು. ನಿನ್ ಮಗಳು ರಾಣಿ ಹಾಗೆ ಕಾಣ್ತಾಳೆ ಅದರಲ್ಲಿ. ಇದೊಂದ ಸಾರಿ ಇಲ್ಲಾ ಅಂತ ಹೇಳ್ಬೇಡ” ಎಂದಾಗ ಸರೋಜಾ, “ಕೆಂಪಂಗಿಯಂತೆ ಕೆಂಪಂಗಿ, ಇಲ್ಲಿ ಎರಡು ಹೊತ್ತು ಊಟಕ್ಕೆ ಕಷ್ಟ, ಅಂತದ್ರಲ್ಲಿ ನಿನಗೆಲ್ಲಿಯ ಕೆಂಪಂಗಿ ತರಲಿ. ಮಲಗು ಬೇಗ. ಬೆಳಗ್ಗೆ ಎದ್ದು ತರಕಾರಿ ಮಾರೋಕೆ ಹೋಗ್ಬೇಕು. ನಮ್ಮಂತವರಿಗೆಲ್ಲ ರೇಷ್ಮೆ ಅಂಗಿ ಬರೀ ಕನಸಲ್ಲಿ ಮಾತ್ರ ಮಲಗು, ಮಲಗು.

    ಕೆಂಪೆಂದರೆ ಅಂತಿಂಥಾ ಕೆಂಪಲ್ಲಾ, ರಕ್ತಚಂದನದ ಕೆಂಪು, ಚಿನ್ನದ ಬಣ್ಣದ ರೇಷ್ಮೆಯ ದಾರದ ದಪ್ಪದ ಅಂಚು. ತೊಟ್ಟು ಊರೆಲ್ಲಾ ಕುಣಿದಾಡಿದ ರೂಪಾ ಮನೆಗೆ ಹಿಂದಿರುಗುವಾಗ ರೇಷ್ಮೆ ಲಂಗ ಬೇಲಿಗೆ ಸಿಕ್ಕಿ ಹರಿದು ಹೋಯಿತು. ಹರಿದ ಕೆಂಪಂಗಿ ರೂಪಾ ಖುಷಿಗೆ ಕ್ಷಣದಲ್ಲೇ ತಣ್ಣೀರೆರಚಿತು. “ನನ್ನಂಗಿ ಚಂದದ ಅಂಗಿ” ಎಂದು ಜೋರಾಗಿ ರೂಪಾ ಅಳಲಾರಂಭಿಸಿದಳು. ಕೂಡಲೇ ಪಕ್ಕದಲ್ಲಿ ಮಲಗಿದ್ದ ಸರೋಜಾ, ಮಗಳನ್ನು ಎಬ್ಬಿಸಿ, “ಏನಾಯಿತು? ಏನಾಯಿತು? ಕನಸೇನಾದರು ಕಂಡೆಯಾ?” ಎಂದು ಕೇಳಿದಾಗ, ಎಚ್ಚೆತ್ತ ರೂಪಾ ಮೊದಲು ನೋಡಿದ್ದು ತನ್ನ ಮೈ ಮೇಲಿದ್ದ ಬಟ್ಟೆಯನ್ನು. ಆದರೆ ಅವಳು ತೊಟ್ಟಿದ್ದು ಅದೇ ಹರಿದ ತೂತುಗಳನ್ನು, ಬಣ್ಣಬಣ್ಣದ ದಾರಗಳಿಂದ ರೇಖೆ ಎಳೆದ ಹಳೆಯ ಅಂಗಿ. ಕಂಡಿದ್ದು ಕನಸ್ಸೆಂದು ಸಪ್ಪೆಮೋರೆ ಮಾಡಿ ಕೂತಳು.

    ಸರೋಜಾ ಮತ್ತು ರೂಪಾ ಒಂದು ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದರು. ತುಂಬು ಗರ್ಭಿಣಿಯನ್ನು ತೊರೆದು ಹೋದ ಸರೋಜಾಳ ಗಂಡ, ಮಗಳಿಗೆ ಹತ್ತು ವರ್ಷವಾದರೂ ವಾಪಸ್ಸು ಮನೆ ಕಡೆ ಬರಲಿಲ್ಲ. ಹೊಟ್ಟೆಪಾಡಿಗಾಗಿ ತಾಯಿ-ಮಗಳು ತರಕಾರಿ ಗಾಡಿ ತಳ್ಳಿಕೊಂಡು ಕೇರಿ-ಕೇರಿ ಹೋಗಿ ವ್ಯಾಪಾರ ಮಾಡಿ, ಬಂದ ಹಣದಲ್ಲಿ ಹೇಗೋ ಹೊಟ್ಟೆ-ಬಟ್ಟೆ ಕಷ್ಟದಲ್ಲಿ ನಡೆಸುತ್ತಿದ್ದರು. ರೂಪಾ ಕೂಡ ಶಾಲೆ ಮುಖ ನೋಡಿದವಳಲ್ಲ. ಬರೀ ತಾಯಿಯೊಂದಿಗೆ ತರಕಾರಿ ಗಾಡಿ ತಳ್ಳುವುದೇ ಅವಳ ನಿತ್ಯ ಕಾಯಕ.

    ಇದರ ಮಧ್ಯದಲ್ಲಿ ಕೆಂಪಂಗಿಯ ನೆನಪು ರೂಪಾಳನ್ನು ಮತ್ತೆ ಮತ್ತೆ ಕಾಡುತ್ತಿತ್ತು. ಆದರೆ ತಾಯಿ ಎರಡು ಹೊತ್ತು ಊಟಕ್ಕಾಗಿ ಪಡುತ್ತಿದ್ದ ಕಷ್ಟ ಕಂಡು ಅವಳನ್ನು ಹೆಚ್ಚು ಪೀಡಿಸಬಾರದು ಎಂದು ಸುಮ್ಮನಿರುತ್ತಿದ್ದಳು.

    ಒಂದು ಮಧ್ಯಾಹ್ನ ಇಬ್ಬರೂ ತರಕಾರಿ ಗಾಡಿಯನ್ನು ನೆರಳಿನಲ್ಲಿ ನಿಲ್ಲಿಸಿ ವಿಶ್ರಮಿಸುತ್ತಿದ್ದರು. ಸರೋಜಾ ಎಲೆ, ಅಡಿಕೆ, ಸುಣ್ಣ ಮಡಚಿ ಬಾಯಿಗೆ ಇಟ್ಟುಕೊಂಡಳು. ಸುಮ್ಮನೆ ಪಕ್ಕದಲ್ಲೇ ಕೂತ ರೂಪಾಗೆ ತಾಯಿಯ ಕೆಂಪು ನಾಲಿಗೆಯ ಕಂಡು ಮತ್ತೆ ಕೆಂಪಂಗಿ ಯ ನೆನಪಾಯಿತು. ಕೂಡಲೇ ಅಮ್ಮನಲ್ಲಿ “ಅಮ್ಮಾ, ನೀನು ಅಪ್ಪನ ಬಗ್ಗೆ ಕೇಳಿದಾಗಲೆಲ್ಲ ಅವರು ಪೇಟೆಗೆ ಕೆಲಸದ ಮೇಲೆ ಹೋಗಿದ್ದಾರೆ ಅಂತೀಯಲ್ಲಾ ಯಾವಾಗಲೂ, ನಿನಗೇನಾದರೂ ಅವರ ವಿಳಾಸಗೊತ್ತಿದ್ದರೆ ಹೇಳು. ನಾನು ಪಕ್ಕದ ಮನೆಯ ಸಿಂಧು ಹತ್ತಿರ ಅಪ್ಪನಿಗೊಂದು ಪತ್ರ ಬರಿಯೋಕೆ ಹೇಳ್ತೀನಿ. ಆ ಪತ್ರದಲ್ಲಿ, ಬರುವಾಗ ನನಗೊಂದು ಕೆಂಪು ರೇಷ್ಮೆ ಅಂಗಿ ತನ್ನಿ ಅಂತ ಹೇಳ್ತೀನಿ.” ಎಂದ ರೂಪಾ ಮಾತಿಗೆ ಸರೋಜಾಗೆ ಎಲ್ಲಿಲ್ಲದ ಕೋಪ ಬಂತು. “ನೀನು ಹುಟ್ಟಿ 10 ವರ್ಷವಾದರೂ ನಿನ್ನನ್ನ ನೋಡೋಕೆ ಬಾರದ ನಿನ್ನ ಅಪ್ಪ ನಿನಗೀಗ ಕೆಂಪಂಗಿ ಕೊಡಲು ಬರುತ್ತಾನೆ. ಮುಚ್ಚು ಬಾಯಿ, ಇನ್ನೆಂದೂ ನಿನ್ನಪ್ಪನ ಹೆಸರು ಹೇಳಬೇಡ” ಎಂದು ಸರೋಜಾ ತುಂಬಾ ನೋವಿನಿಂದ ನುಡಿದಳು. ಹೆಂಡತಿ-ಮಕ್ಕಳ ಸಾಕಲಾಗದೆ ಇಂತಹ ಬಡತನದ ಕೂಪಕ್ಕೆ ತಳ್ಳಿ ಹೋದ ಗಂಡನ ಬಗ್ಗೆ ಮಗಳು ಮಾತನಾಡಿದಾಗ ಸರೋಜಾ ಕೋಪ ಜ್ವಾಲಾಮುಖಿಯಂತೆ ಹೊಮ್ಮಿತು. ತಾಯಿಯ ಕೋಪ ಕಂಡು ಹೆದರಿದ ರೂಪಾ ಇನ್ನೆಂದೂ ತಾಯಿಯನ್ನು ಕೆಂಪಂಗಿ ಕೇಳೆನು ಎಂದು ನಿರ್ಧರಿಸಿ ತನ್ನ ಆಸೆಯ ಬುತ್ತಿಯನ್ನು ಮುಚ್ಚಿಟ್ಟಳು.

    ಎಷ್ಟೇ ಮರೆಯುತ್ತೇನೆ ಎಂದರೂ ಮತ್ತೆ ಮತ್ತೆ ರೂಪಾಗೆ ಕೆಂಪು ಬಣ್ಣ ಕಂಡಲ್ಲೆಲ್ಲ ರೇಷ್ಮೆಯ ಕೆಂಪಂಗಿಯ ನೆನಪು ಕಾಡುತ್ತಿತ್ತು. ಆದರೆ ಅವಳು ನಿರ್ಧಾರ ಮಾಡಿಯಾಗಿತ್ತು. ಎಂದೂ ಅಮ್ಮನನ್ನು ಅಂಗಿಗಾಗಿ ಪೀಡಿಸಲಾರೆ, ನಾನೇ ಹೇಗಾದರೂ ಮಾಡಿ ಕೊಂಡುಕೊಳ್ಳುತ್ತೇನೆ ಎಂದು.

    ಮನೆಯ ಮೂಲೆಯಲ್ಲಿ ತುಕ್ಕು ಹಿಡಿದು ಕುಳಿತ ಹುಂಡಿಯನ್ನು ಶುದ್ಧ ಮಾಡಿ. ಆ ಹುಂಡಿಗೆ ಹಣವನ್ನು ಒಟ್ಟುಮಾಡಲು ಶುರುಮಾಡಿದಳು. ಹಬ್ಬ ಹರಿದಿನಗಳಲ್ಲಿ ಊರ ಯಜಮಾನರ ಮನೆಯಲ್ಲಿ ಮಕ್ಕಳಿಗಾಗಿ 5, 10ರೂ ಕೊಡುತ್ತಿದ್ದರು. ಆ ರೂಪಾಯಿಗಳು ಕೂಡ ರೂಪಾ ಹುಂಡಿಗೆ ಸೇರಿಸುತ್ತಿದ್ದಳು. ಎಂದಾದರೂ ಸಹಾಯ ಮಾಡಿದಾಗ ಸಿಹಿ ತಿಂಡಿ ತಿನ್ನಲು ಸರೋಜಾ ಒಂದು ರೂಪಾಯಿ ಕೊಡುತ್ತಿದ್ದಳು, ಅದನ್ನೂ ಕೂಡ ತಿನ್ನದೆ ತನ್ನ ಹುಂಡಿಯಲ್ಲಿ ಸಂಗ್ರಹಿಸುತ್ತಿದ್ದಳು.

    ಪ್ರತಿದಿನ ತಾಯಿ-ಮಗಳು ತರಕಾರಿ ವ್ಯಾಪಾರಕ್ಕೆ ಹೋಗುತ್ತಿದ್ದರು. ಅದರಲ್ಲಿ ಕೊಳೆತ ತರಕಾರಿಗಳನ್ನು ತಾಯಿ ಎಸೆಯುತ್ತಿರುವುದ ಗಮನಿಸಿದ ರೂಪಾ, ಪ್ರತಿದಿನ ತರಕಾರಿ ವ್ಯಾಪಾರ ಮುಗಿಸಿ ಮನೆಗೆ ಬಂದೊಡನೆ ತರಕಾರಿ ಗಾಡಿಯಲ್ಲಿ ಕೊಳೆತ ತರಕಾರಿಗಳನ್ನು ಮನೆಯ ಹಿಂದೆ ಗುಂಡಿ ಮಾಡಿ ಅಲ್ಲಿ ಸಂಗ್ರಹಿಸ ತೊಡಗಿದಳು. ಕೊಳೆತ ತರಕಾರಿಯ ಮೇಲೆ ಒಣಗಿದ ಎಲೆಗಳನ್ನು ಸೇರಿಸಿ, ಅದರಲ್ಲಿ ಸಾವಯವ ಗೊಬ್ಬರ ತಯಾರು ಮಾಡತೊಡಗಿದಳು. ಎರಡು-ಮೂರು ತಿಂಗಳಿಗೊಮ್ಮೆ ಆ ಗೊಬ್ಬರವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ೧೦-೨೦ ರೂ ಸಂಪಾದನೆ ಮಾಡಿ ಅದನ್ನು ಕೂಡ ಕೆಂಪಂಗಿಯ ಖಾತೆಗೆ ಸೇರಿಸಿಕೊಳ್ಳುತ್ತಿದ್ದಳು. ಹೀಗೆ ಎರಡು ವರ್ಷಗಳು ಕಳೆದರೂ ರೂಪಾ ಕೂಡಿಡಲು ಸಾಧ್ಯವಾದದ್ದು ಕೇವಲ 350 ರೂಪಾಯಿ. ಆದರೂ ಕೆಂಪಂಗಿಯ ಮೇಲಿನ ಆಸೆ ಮಾತ್ರ ಸ್ವಲ್ಪವೂ ಕಡಿಮೆ ಆಗಿರಲಿಲ್ಲ.

    ಅದೇಕೋ ಸರೋಜಾ ತರಕಾರಿ ವ್ಯಾಪಾರವು ಒಂದು ತಿಂಗಳಿಂದ ಕಮ್ಮಿಯಾಗಿತ್ತು. ಎರಡು ಹೊತ್ತು ಊಟಕ್ಕೆ ಬೇಕಾಗುವ ರೇಷನ್ ಗೂ ತುಂಬಾ ಕಷ್ಟಪಡುವಂತಾಗಿತ್ತು. ಒಂದು ದಿನ ಸಂಜೆ ರೇಷನ್ ಅಂಗಡಿಯ ಮಾಲಿಕ ತನಗೆ ಬರಬೇಕಾದ ₹300 ಬಾಕಿ ಹಣವನ್ನು ವಸೂಲಿ ಮಾಡಲು ಬಂದಿದ್ದ. ಆ ವೇಳೆಗೆ ರೂಪ ಆಟವಾಡಲು ಹೋಗಿದ್ದಳು. ಕೈಯಲ್ಲಿ ಹಣವಿಲ್ಲದ ಸರೋಜಾ ದಿಕ್ಕೇ ತೋಚದಂತಾದಳು. ಅವರ ಎಲ್ಲಾ ಪ್ರಶ್ನೆಗೆ ಉತ್ತರವಿಲ್ಲದೆ ತಲೆ ತಗ್ಗಿಸಿ ನಿಂತಳು. ಕೋಪಗೊಂಡ ಅಂಗಡಿಯ ಮಾಲೀಕ ಬರೀ 300 ರೂಪಾಯಿಗೆ ಒಂದೇಟು ಕೆನ್ನೆಗೆ ಹೊಡೆದೇ ಬಿಟ್ಟ. ಇನ್ನು ಎರಡು ದಿನಗಳಲ್ಲಿ ಹಣ ವಾಪಸು ಮಾಡು ಎಂದು ಹೇಳಿ ಹೊರಟು ಹೋದ.

    ಆಟ ಮುಗಿಸಿ ಮನೆಗೆ ಬಂದ ರೂಪಾ ಅಳುತ್ತಾ ಮೂಲೆಯಲ್ಲಿ ಕೂತ ತಾಯಿಯ ಬಳಿ ಹೋದಾಗ, ತಾಯಿಯ ಕೆನ್ನೆ ಕೆಂಪಾಗಿತ್ತು. ಕೆಂಪಾದ ತಾಯಿಯ ಕೆನ್ನೆ ರೂಪಾಗೆ ನೋಡಲಾಗಲಿಲ್ಲ. ಏನಾಯಿತೆಂದು ಅಮ್ಮನನ್ನು ಕೇಳಿದಾಗ, ಅಳುತ್ತಲೇ ನಡೆದ ಸಂಗತಿಯನ್ನು ಮಗಳಲ್ಲಿ ಹೇಳಿಕೊಂಡಳು. ಬರಿಯ ಬಾಕಿ ಹಣಕ್ಕಾಗಿ ತಾಯಿ ಕೆನ್ನೆ ಕೆಂಪಾಗುವವರೆಗೆ ಏಟು ತಿಂದಿದ್ದು ಮಗಳಿಗೆ ಸಹಿಸಲಾಗಲಿಲ್ಲ. ಆ ಸಮಯದಲ್ಲಿ ತಕ್ಷಣಕ್ಕೆ ಅವಳಿಗೆ ಕಂಡಿದ್ದು ಕೆಂಪಂಗಿಯ ಖಜಾನೆ. ತಾಯಿಯ ಕೆಂಪು ಕೆನ್ನೆಯ ಮುಂದೆ ಕೆಂಪಂಗಿಯ ಬಣ್ಣ ಮಸುಕಾಗಿತ್ತು. ಹುಂಡಿ ದುಡ್ಡನ್ನು ತೆಗೆದು ಕೂಡಲೇ ಅಂಗಡಿಗೆ ಹೋಗಿ ತಾಯಿಯ ಸಾಲ ತೀರಿಸಿದಳು. ಹಾಗೆಯೇ ನನ್ನ ತಾಯಿಯ ಕೆನ್ನೆಗೆ ಹೊಡೆದ ಪ್ರತೀಕಾರ ಮುಂದೆಂದಾದರೂ ತೀರಿಸುತ್ತೇನೆ ಎಂಬ ಭಾವ ಕಣ್ಣಲ್ಲೇ ತೋರಿಸಿ ಮನೆಗೆ ನಡೆದಳು. ಆ ಪುಟ್ಟ ಕೆಂಪು ಕಣ್ಣುಗಳು ಯಾರನ್ನಾದರೂ ನಡುಗಿಸುವಂತಿತ್ತು.

    ಮಗಳು ಬಹಳ ದಿನಗಳಿಂದ ಕೆಂಪಂಗಿಗಾಗಿ ಕೂಡಿಟ್ಟ ಹಣ ಹೀಗೆ ಹೋಯಿತಲ್ಲ ಎಂದು ತಾಯಿ ಸರೋಜಗೆ ತುಂಬಾ ಬೇಸರವಾಯಿತು. ಆ ಮಗುವಿನ ಈ ಪುಟ್ಟ ಆಸೆಯನ್ನು ನನಗೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಕೊರಗುತ್ತಾ ಕೂತಳು.

    ಬಡತನದಲ್ಲಿ ಇಂತಹ ನೋವು, ಅವಮಾನ, ನಿರಾಸೆಗಳೆಲ್ಲ ಸ್ವಾಭಾವಿಕವಾಗಿತ್ತು. ಮತ್ತೆ ಮರುದಿನ ಹೊಸ ಮುಂಜಾನೆ ಮತ್ತದೇ ಬದುಕಿಗಾಗಿ, ಹೊಟ್ಟೆಗಾಗಿ ಹೋರಾಟಕ್ಕೆ ತಾಯಿ ಮಗಳಿಬ್ಬರೂ ಸಿದ್ಧರಾದರು. ಹಳೆ ನೋವುಗಳು ಹೃದಯದ ಮೂಲೆಯಲ್ಲಿ ಕೂತಿದ್ದರೂ, ನೋವು ನಿರಾಸೆಗಳು ಪದೇಪದೇ ಹೊರಬಂದು ವ್ಯಥೆ ಪಡುತ್ತಾ ಕೂರಲು ಮತ್ತು ಅದಕ್ಕೆ ಔಷಧ ಹಾಕಲು ಹಸಿದ ಹೊಟ್ಟೆ ಅವಕಾಶ ಕೊಡುತ್ತಿರಲಿಲ್ಲ. ಹಾಗಾಗಿ ಎಲ್ಲವನ್ನೂ ಬದಿಗಿಟ್ಟು ತಾಯಿ-ಮಗಳು ವರ್ತಮಾನದಲ್ಲಿ ಬದುಕುತ್ತಿದ್ದರು.

    ಹೀಗೆ ತಾಯಿ-ಮಗಳು ಪ್ರತಿದಿನದಂತೆ ತರಕಾರಿ ವ್ಯಾಪಾರಕ್ಕೆ ಹೊರಟರು. ಹೋಗುತ್ತಾ ದಾರಿಯಲ್ಲಿ ತೋಟದ ಮಧ್ಯದಲ್ಲಿ ಬಹಳಷ್ಟು ಜನರು ಸೇರಿದ್ದು ಕಣ್ಣಿಗೆ ಬಿತ್ತು. ಏನಾಗಿರಬಹುದು ಎನ್ನುವ ಕುತೂಹಲದಲ್ಲಿ ನೋಡಿದರೆ, ಅಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಹಿಂದೆಂದೂ ಇದನ್ನೆಲ್ಲ ಕಂಡಿರದ ರೂಪಾಗಂತು ಬೇರೆ ಜಗತ್ತೇ ನೋಡಿದಂತಾಯಿತು. ಆ ದೊಡ್ಡ ದೊಡ್ಡ ಕ್ಯಾಮೆರಾ ಅಲ್ಲಿದ್ದ ಪಾತ್ರದಾರಿಗಳನ್ನೆಲ್ಲಾ ಬಿಟ್ಟಕಣ್ಣು ಬಿಟ್ಟಂತೆ ನೋಡತೊಡಗಿದಳು.

    “ಇನ್ನೂ ಬಹಳಷ್ಟು ಕೇರಿಗೆ ತರಕಾರಿ ಮಾರೋಕೆ ಹೋಗುವುದಿದೆ ಬಾ ಹೊರಡೋಣ” ಎಂದು ತಾಯಿ ಎಷ್ಟು ಕರೆದರೂ ರೂಪಾ ಕಿವಿಗದು ಬೀಳಲಿಲ್ಲ.

    ಜನಸಂದಣಿಯ ಮಧ್ಯದಲ್ಲಿ ನಿಂತ ತಾಯಿ ಮಗಳು, ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ನಿರ್ದೇಶಕರ ಕಣ್ಣಿಗೆ ಬಿದ್ದರು. ತಕ್ಷಣ ನಿರ್ದೇಶಕರು ಅವರಿಬ್ಬರನ್ನು ಕರೆದು “ಏನು ಪುಟ್ಟ, ಆಕ್ಟಿಂಗ್ ಮಾಡ್ತೀಯಾ? ಏನು ನಿನ್ನ ಹೆಸರು?” ಎಂದು ಕೇಳಿದರು. “ನನ್ ಹೆಸರು ರೂಪಾ ಆಕ್ಟಿಂಗ್ ಮಾಡೋಕೆ ಇಷ್ಟ, ಆದರೆ ಹಿಂದೆಂದೂ ಇದೆಲ್ಲ ಕಂಡವಳಲ್ಲ ನಾನು” ಎಂದಳು. ಏನೂ ಮಾತನಾಡದ ಸರೋಜಾ ಬರೇ ಕಣ್ಣಿನಲ್ಲೇ ನೀನು ಮಾಡಬಲ್ಲೆ ಮಗಳೇ ಎಂಬ ಆತ್ಮವಿಶ್ವಾಸವನ್ನು ತುಂಬಿದಳು.

    ಆಗ ನಿರ್ದೇಶಕರು “ಇರಲಿ ಬಿಡು ಪ್ರಯತ್ನ ಮಾಡು, ಈ ಚಿತ್ರದಲ್ಲೊಂದು ಜಮೀನ್ದಾರರ ಮೊಮ್ಮಗಳ ಪಾತ್ರ ಇದೆ. ನೀನು ಆ ಪಾತ್ರಕ್ಕೆ ಸರಿಯಾಗಿ ಹೊಂದುತ್ತಿ” ಎಂದರು. ಇದನ್ನು ಕೇಳಿದ ರೂಪಾಳ ಖುಷಿಗೆ ಪಾರವೇ ಇರಲಿಲ್ಲ. ಆ ಪಾತ್ರ ಮಾಡಬೇಕಾದ ಬಾಲಕಿ ಅನಾರೋಗ್ಯದ ಕಾರಣ ಬಂದಿರುವುದಿಲ್ಲ. ಚಿತ್ರದಲ್ಲಿ ಆ ಪಾತ್ರ ಬರೀ ಮೂರು ನಾಲ್ಕು ನಿಮಿಷ ಅಷ್ಟೇ ಇರುವುದರಿಂದ, ಹೆಚ್ಚೇನು ಡೈಲಾಗ್ ಇರಲಿಲ್ಲ. ಅಲ್ಲೇ ಪಕ್ಕದಲ್ಲಿ ಸಹಾಯಕ ನಿರ್ದೇಶಕರು ಡೈಲಾಗ್ ಹೇಳಿಕೊಟ್ಟು, ನಾಳೆ ಮುಂಜಾನೆ ಬನ್ನಿ ಎಂದರು. ಅದೇ ಉತ್ಸಾಹದಲ್ಲಿ ತಾಯಿ-ಮಗಳು ಅಲ್ಲಿಂದ ಹೊರಟು ಇನ್ನೆರಡು ಕೇರಿ ತರಕಾರಿ ವ್ಯಾಪಾರ ಮುಗಿಸಿ ಮನೆ ಕಡೆ ನಡೆದರು.

    ರೂಪಾ ಮಾತ್ರ ಅದೇ ಶೂಟಿಂಗ್, ಅವಳಿಗೆ ಕೊಟ್ಟ ಡೈಲಾಗ್ ನಲ್ಲೇ ಮುಳುಗಿದ್ದಳು. ತಾಯಿ ಮಗಳಿಗೆ ಆ ರಾತ್ರಿ ತುಂಬಾ ದೊಡ್ಡದು ಎನ್ನಿಸಿತು. ಮುಂಜಾನೆ ಬೇಗ ಎದ್ದು ರೂಪಾ ತನ್ನಲ್ಲಿರುವ ಅಂಗಿಗಳಲ್ಲಿ ಕಡಿಮೆ ಹರಿದಿರುವ ಅಂಗಿಯನ್ನು ತೊಟ್ಟು, ಅಮ್ಮನೊಂದಿಗೆ ಶೂಟಿಂಗ್ ಜಾಗಕ್ಕೆ ಹೊರಟಳು. ದೂರದಲ್ಲಿ ನಿಂತ ರೂಪಾಳನ್ನು ಹತ್ತಿರ ಕರೆದು, ನಿನಗೆ ನಾವು ಬೇರೆ ಬಟ್ಟೆ ಕೊಡುತ್ತೇವೆ. ಅದನ್ನು ತೊಟ್ಟು, ಮೇಕಪ್ ಅಸಿಸ್ಟೆಂಟ್ ಹತ್ರ ಮೇಕಪ್ ಮಾಡಿಸ್ಕೊಂಡು ಬಾ ಎಂದು ಸಹಾಯಕ ನಿರ್ದೇಶಕರು ವಿವರಿಸಿದರು. ಸರಿಯೆಂದು ಒಳನಡೆದ ರೂಪಾಳಿಗೆ ಆಶ್ಚರ್ಯ ಕಾದಿತ್ತು. ರೂಪಾಳಿಗೆ ಅವರು ಕೊಟ್ಟಿದ್ದು ಕೆಂಪು ರೇಷ್ಮೆಯ ಅಂಗಿ. ಕೆಂಪಂಗಿ ನೋಡಿದ ರೂಪಾ ಕಾಲುಗಳು ನಿಲ್ಲಲೇ ಇಲ್ಲ. ಅಂದು ಕನಸಲ್ಲಿ ಕಂಡ ಕೆಂಪಂಗಿಯಂತೆಯೇ ಇದೆ ಎಂದು ಕುಣಿದಾಡಿದಳು. ಬಹಳ ಉತ್ಸಾಹದಿಂದ ಕೆಂಪಂಗಿಯ ತೊಟ್ಟು, ಮೇಕಪ್ ಮಾಡಿಸಿಕೊಂಡು ತಾಯಿಯ ಮುಂದೆ ಬಂದು ನಿಂತಳು.

    ಮಗಳನ್ನು ರೇಷ್ಮೆಯ ಅಂಗಿಯಲ್ಲಿ ಕಂಡು ಅಮ್ಮನ ಕಣ್ಣು ಆನಂದ ಭಾಷ್ಪದಿ ತುಂಬಿತು. “ಸಾಕ್ಷಾತ್ ದೇವಿಯಂತೆ ಕಾಣುತ್ತಿದ್ದೀಯ” ಎಂದು ಮಗಳಿಗೆ ದೃಷ್ಟಿ ತೆಗೆದಳು. ನಂತರ ರೂಪಾ ತನ್ನ ಪಾತ್ರದ ಸರದಿಗಾಗಿ ಅಮ್ಮನ ಪಕ್ಕ ಕುಳಿತು ಕೆಂಪಂಗಿಯ ರಂಗನ್ನು ಆನಂದಿಸುತ್ತಾ ಕಳೆದಳು. ಹಾಗೆಯೇ ಕೆಲಸಮಯದ ನಂತರ ನಿರ್ದೇಶಕರು ರೂಪಾಳನ್ನು ಕರೆದಾಗ ಅವಳ ಪುಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಈಚೆ ಬಂದಳು. ಅಷ್ಟು ಹೊತ್ತಿಗೆ ಹೊತ್ತು ಮುಳುಗುವ ಸಮಯವಾಗಿತ್ತು. ರೂಪ ಮತ್ತದೇ ಕೊಠಡಿಗೆ ಹೋಗಿ ಕೆಂಪಂಗಿಯನ್ನು ಬದಲಿಸಿ, ತನ್ನಂಗಿಯನ್ನು ಹಾಕಿಕೊಂಡಳು. ಕೆಂಪಂಗಿಯನ್ನು ಚೆನ್ನಾಗಿ ಮಡಚಿ, ಒಂದು ದಿನಕ್ಕೆ ರಾಜಕುಮಾರಿಯಂತೆ ಮೆರೆಸಿದ ಕೆಂಪಂಗಿಗೆ ಮುತ್ತಿಕ್ಕಿ, ಅಲ್ಲೇ ಇಟ್ಟು ಹೊರ ಬಂದಳು. ಅಸಿಸ್ಟೆಂಟ್ ಡೈರೆಕ್ಟರ್, ಸರೋಜಾ ಕೈಗೆ 500ರೂಪಾಯಿ ಹಣ ಕೊಟ್ಟರು. ತಾಯಿ-ಮಗಳು ಬಹಳ ಸಂತೋಷದಿಂದ ಮನೆ ಕಡೆ ನಡೆದರು. ದಾರಿಯಲ್ಲಿ ಹೋಗುವಾಗ ರೂಪಾಗೆ ತಾನಿನ್ನೂ ರೇಷ್ಮೆ ಅಂಗಿತೊಟ್ಟು ನಡೆಯುತ್ತಿದ್ದೇನೆನೋ ಎನ್ನುವ ಭಾವ. ಇನ್ನೊಂದೆಡೆ ತಾಯಿಗೆ ಒಂದು ದಿನದ ಮಟ್ಟಿಗಾದರೂ ಮಗಳ ಬಯಕೆಯನ್ನು ಆ ಭಗವಂತ ಈಡೇರಿಸಿದ ಎಂದು ದೇವರಿಗೆ ಧನ್ಯವಾದ ಹೇಳುತ್ತಾ ಮನೆ ತಲುಪಿದರು.

  • ಜೊತೆಗಿರಲು

    ಸಮಯ ಸ್ವಲ್ಪವೂ ಸುಳಿವು ಕೊಡದೆ,

    ಸರಿದಿದೆ ನೀ ಜೊತೆಗಿರಲು.

    ಮನವು ಮರ್ಕಟವಾಗಿ ಅರಳು ಮರಳು,

    ನಿನ್ನ ನೋಡುತಿರಲು.

    ಮೊದಲ ಭೇಟಿಯ ಅನುಭವದ ಹುರುಪು,

    ಪ್ರತಿಬಾರಿ ನೀನು ಸಿಗಲು.

    ಮಾತು ಮರೆಸಿ ಮೌನಿಯಾಗಿಸಿತು,

    ಮತ್ತದೇ ನಿನ್ನ ಮುಂಗುರುಳು.

    ನೀ ಹೊರಟ ಮೇಲೆ ಕಾಡುವವು,

    ಉಳಿದುಹೋದ ಶಬ್ದಗಳ ಸಾಲು.

    ಎದೆಬಡಿತವು ಏರು ಪೇರು,

    ನೀ ಮತ್ತೆ ಸಿಗುವೆ ಎನ್ನಲು.

    ಕಣ್ಣಲ್ಲೇ ಹೇಗೆ ಸೆರೆ ಹಿಡಿಯಲಿ,

    ನೀ ಹೊರಡುವೆನೆನ್ನುವ ಮೊದಲು.

  • ಕಾವು

    ಹೌದೇ.. ನೀನು ಹೆಣ್ಣು. ನೀನು ತಾಯಿ. ಸಹನೆಗೆ ಸ್ಫೂರ್ತಿ, ಕರುಣೆಯ ಶಿಖರ, ತ್ಯಾಗಕ್ಕೆ ತವರು. ಹಾಗಂತ ಈ ಕಿರೀಟ ನಿನ್ನನ್ನು ಕಟ್ಟಿ ಹಾಕದಿರಲಿ. ನೀನು ಹೊಟ್ಟೆಯಲ್ಲಿ ಹೊತ್ತು ತಿರುಗ ಬೇಕಾಗಿದ್ದು ಕನಸಿನ ಕೂಸನ್ನು. ಬೆಂಕಿಯ ಉಂಡೆಯನ್ನಲ್ಲ. ಇನ್ನೆಷ್ಟು ದಿನ ಬೆಳೆಸುವೆ ಒಡಲೊಳಗೆ ಬೆಂಕಿಯುಂಡೆಯ. ಹೊರಹಾಕಿ ಹಗುರಾಗೇ. ಇಲ್ಲವಾದರೆ ಆ ತಾಪಕ್ಕೆ ನಿನ್ನುದರದ ಅಂಗಾಂಗ ಕರಗೀತು. ಆಮೇಲೆನಿದೆ ಚರ್ಮದ ಹೊದಿಕೆಯಲ್ಲಿ? ಕೊನೆಗೆ ಅದೂ ಕಪ್ಪು ಉಂಡೆಯೇ.

    ಮೋಡ ಕಟ್ಟಿದೆ, ಇನ್ನೇನು ಮಳೆಯಾಗಲಿದೆ. ಕಕ್ಕಿ ಬಿಡೆ ಹೊರಗೆ. ವರುಣ ದೇವನು ವರ್ಷಧಾರೆಯ ಸುರಿಸಿ, ತಣ್ಣಗಾಗಿಸುವನು ಜ್ವಾಲೆಯ. ಅದೆಷ್ಟೋ ಬಾರಿ ಜ್ವಾಲಾಮುಖಿಯಾಗಿ ಹೊರಬರಲು ಹವಣಿಸಿದಾಗೆಲ್ಲ, ಮತ್ತೆ, ಮತ್ತೆ ಏಕೆ ನುಂಗಿ ಹುದುಗಿರಿಸಿರುವೇ? ನಿನ್ನ ನೀನೇ ಸುಟ್ಟು ಇನ್ನಾವ ತ್ಯಾಗಕ್ಕೆ ಮಣೆ ಹಾಕ ಹೊರಟಿರುವೆ? ಯಾಕೀ ಕರುಣೆ? ಯಾಕೀ ಸಹನೆ? ಇನ್ನೆಷ್ಟು ದಿನ ಈ ವೇದನೆ?

    ಇಷ್ಟೆಲ್ಲಾ ಕುದಿ ಒಳಗಡಗಿರಲೂ, ಹೇಗೆ ತಾಯಿ ನಿನ್ನದಿನ್ನೂ ತಂಪು ಮಡಿಲು. ಪ್ರತಿ ಬಾರಿ ನಿನ್ನ ಮಡಿಲಲ್ಲಿ ಮಲಗಿದಾಗಲೂ, ಅದೇ ತಂಪು. ಹೊಂಗೆ ಮರದಡಿಯನ್ನು ಮೀರಿಸುವ ತಂಪು. ಹೇಗೆ ಸಾಧ್ಯ ತಾಯಿ ಇದು. ಬೆಂಡಾಗಿ ಬಳಲಿರುವ ಭಾವ ಬೆರೆತಿಲ್ಲ ನಿನ್ನ ಭರವಸೆಯ ಬದುಕಲ್ಲಿ. ಕೆಂಡದ ಹಾಸಿಗೆ ನಿನ್ನೊಳಗಿದ್ದರೂ, ಲೋಕದ ಕಷ್ಟಕ್ಕೆ ನೀ ಕಿವಿಗೊಡುವೆ. ಮನ ಹಗುರಾಗಿಸುವೆ. ಅದೆಷ್ಟು ಶಕ್ತಿ ಅಡಗಿಹುದು ನಿನ್ನಲಿ.

    ಅಂದು ಸುಟ್ಟೆ ನಿನ್ನೆಲ್ಲಾ ಕನಸ್ಸನ್ನು. ಇಂದು ನೀ ಸುಡ ಹೊರಟಿಹೆ ನಿನ್ನನ್ನೇ ನೀನು. ಇದೆಂತಹ ಹೋರಾಟ ನಿನ್ನದು? ನೀನಳಿದು, ಯಾರುಳಿವಿಗಾಗಿ ಹೋರಾಡುತ್ತಿರುವೆ? ಹೊಟ್ಟೆಯ ಹುಣ್ಣನ್ನೂ ಕಡೆಗಣಿಸಿ, ಹಸಿರೆದೆಯಿಂದ ಹಾಲುಣಿಸಿ, ಹಸಿವಾರಿಸಿ, ಕಾದೆ ನೀ ಇನ್ನೊಂದು ಕಾಯವ. ಆದರೆ ಜೀವಕ್ಕೆ ಕಾವು ಕೊಡೇ, ಜಡ್ಡು ಜಡಕ್ಕಲ್ಲ. ಹೂವಿನಂತಹ ಮುಖ ನೋಡಿ ಮುಳ್ಳನ್ನು ಕಡೆಗಣಿಸಿ, ಸೂರೆತ್ತರಕೆ ಬೆಳೆಸಿ, ಗುಡಿ ಸೇರಲಿಲ್ಲ. ಮುಡಿ ಏರಿಸಲಿಲ್ಲ. ಆದರೂ ನೀ ಕಿತ್ತೊಗೆಯಲಿಲ್ಲ. ಯಾವುದರ ಪ್ರೀತಿ ಬಂಧಿಸಿಹುದು ಹೀಗೆ?

    ಹೌದು, ನನಗೆ ಗೊತ್ತಿದೆ. ನಿನಗೆ ಸುಡುತಿದೆ. ಗಾಯ ಹಸಿ ಇದೆ. ಉರಿಯುತ್ತೆ. ಅದಕ್ಕೆ ತಾನೇ, ಎಲ್ಲರಿಗೂ ಬಿಸಿ-ಬಿಸಿ, ರುಚಿ-ರುಚಿ ಬಡಿಸಿ, ನಿನಗೆ ಎಷ್ಟೇ ಹಸಿವಿದ್ರೂ, ತಣ್ಣಗಿನ ನೀರು ಕುಡಿದು ತಂಪಾಗುವ ಪ್ರಯತ್ನ ಮಾಡೋದು. ಆದ್ರೆ ಹಾಗೆಲ್ಲ ತಂಪಾಗಲ್ಲ್ವೇ. ಅದೆಲ್ಲಾ ನಿನ್ನ ಭ್ರಮೆ ಅಷ್ಟೇ.

    ಹೊತ್ತು ಮುಳುಗುವ ಮುನ್ನ ನೀ ಹೊತ್ತ ಬೆಂಕಿಯ ಉಂಡೆ ಹೊತ್ತಿ ಉರಿಯುವುದು ನಿಶ್ಚಿತ. ಅಂದು ನಿನ್ನ ಹಾಗೂ ನಿನ್ನವರನ್ನು ನುಂಗುವುದರೊಂದಿಗೆ, ನಂಬಿಕೆಯ ನಾಶವಾಗುವುದೇ. ಅದಕ್ಕಿಂತ ಮೊದಲು ನೀನು ಸಿಡಿದೆದ್ದು ಮಹಾಕಾಳಿಯಾಗೇ. ಒಮ್ಮೆ ಉಕ್ಕಿ ಹೊರಬಂದು, ತುಸುಹೊತ್ತು ಹೊತ್ತಿ ಉರಿದು, ವಿಷಬೀಜಗಳನ್ನೆಲ್ಲ ಬೇರುಸಹಿತ ಸುಟ್ಟು, ಆರಿ ತಣ್ಣಗಾಗಲಿ ಬಿಡು. ಆಗಲೇ ನಿನ್ನಂತಹ ಹೆಂಗರಳಿಗೆ ನೆಮ್ಮದಿ. ಚೆನ್ನಾಗಿ ಮಳೆ ಬಂದು ನಿಂತಾಗ ಭುವಿಯಲ್ಲಿ ಒಂದು ತರಹದ ಮೌನ, ತಂಪು, ನೆಮ್ಮದಿಯ ಉಸಿರಿನ ಭಾವ ಮೂಡುತ್ತಲ್ಲ! ಅದೇ ಭಾವ ಮೇಳ ನಿನ್ನೊಳಗೆ ಮೊಳಗುವುದೇ. ಎಲ್ಲರೊಟ್ಟಿಗಿದ್ದೂ ಒಂಟಿಯಾಗಿ ಬದುಕಿ, ಎಲ್ಲದ್ದಕ್ಕೂ ಎಲ್ಲೇ ಹಾಕಿ ನಡೆದದ್ದು ಸಾಕು. ನಿನ್ನ ಅಸಹಾಯಕತೆ ಎಂದೂ ಅವಕಾಶವಾದಿಗಳಿಗೆ ಏಣಿ ಆಗದಿರಲಿ. ಹೆಡೆಯಂತಹ ಜಡೆಯಿಂದ ಒಮ್ಮೆ ಬುಸುಗುಟ್ಟಿ, ನೀ ಅಬಲೆಯಲ್ಲ, ನಿನ್ನ ಸಮಬಲಕ್ಕೆ ಯಾರೂ ನಿಲ್ಲಲಾರೆಂಬ ಕಹಳೆ ಊದೇ. ಬೆಚ್ಚಿ ಬೆಚ್ಚಿ ಬದಿ ಸೇರಿ, ಬೆಂದ ಜೀವಗಳಿಗೆ ನಿನ್ನ ಒಂದು ದಿಟ್ಟ ಹೆಜ್ಜೆ ದಾರಿದೀಪವಾಗಲಿ..

  • ಶಾರದಾ

    ಬಹಳ ವರ್ಷಗಳ ನಂತರ ನಮ್ಮೂರ ಜಾತ್ರೆಗೆ ನನ್ನ ಸವಾರಿ ಹೊರಟಿತ್ತು. ಚಿಕ್ಕಂದಿನಲ್ಲಿ ಜಾತ್ರೆಗೆ ಹೋಗುವಾಗ ಇದ್ದ ಸಂಭ್ರಮ, ಉತ್ಸಾಹ ಇಷ್ಟು ವರ್ಷಗಳಾದರೂ ಚೂರೂ ಕಡಿಮೆ ಆಗಿರಲಿಲ್ಲ. ಪರ ಊರಿನಲ್ಲಿ ಇದ್ದ ಕಾರಣ ಪ್ರತಿ ವರ್ಷವೂ ನನ್ನ ಜಾತ್ರೆ ನೋಡುವ ಆಸೆ ಮುಂದೂಡುತ್ತ ಹೋಗುತ್ತಿತ್ತು. ಬಹಳ ವರ್ಷಗಳ ನಂತರ ಈ ಬಾರಿ ಊರ ಜಾತ್ರೆಯ ಜನಸಾಗರದಲ್ಲಿ ನಾನು ಮುಳುಗಿ, ನನ್ನ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ, ಹೊಸ ನೆನಪುಗಳ ಜೋಳಿಗೆಯನ್ನು ತುಂಬುತ್ತಾ ಸಾಗಿದೆ.

    ರಥ ಎಳೆದರು, ದೇವಿಯ ದರ್ಶನವಾಯಿತು. ಬಗೆ ಬಗೆಯ ತಿಂಡಿ-ತಿನಿಸುಗಳು ನನ್ನ ಬ್ಯಾಗು ಸೇರಿತು. ಕತ್ತಲಾಗುತ್ತ ಬಂತು, ಮನೆ ಕಡೆಗೆ ಹೊರಡಲು ಸ್ವಲ್ಪ ಜನಜಂಗುಳಿಯನ್ನು ದಾಟಿ ಹೊರಬಂದ ಕೂಡಲೇ ದೂರದಿಂದ ಯಾರೋ ಸವಿತಾ… ಸವಿತಾ… ಎಂದು ನನ್ನನ್ನು ಕೂಗಿದ ಹಾಗಾಯಿತು. ಹಿಂತಿರುಗಿದಾಗ ಕಂಡಿದ್ದು ‘ಶಾರದಾ’… ‘ಹೇ… ಸವಿತಾ ಹೇಗಿದ್ದೀಯ? ಎಷ್ಟು ವರ್ಷ ಆಯ್ತು ನೀನು ಸಿಗದೇ. ಕಳೆದ ತಿಂಗಳು ನನ್ನ ಮದುವೆ ಆಯ್ತು, ಅಲ್ಲಿ ನೋಡು ಆ ಬಿಳಿ ಕಾರಿನಲ್ಲಿ ಕುಳಿತ್ತಿದ್ದಾರಲ್ಲ ಅವರೇ ನನ್ನ ಗಂಡ, ನಾನು ಈವತ್ತು ನೇರವಾಗಿ ನನ್ನ ಗಂಡನ ಮನೆಯಿಂದ ಕಾರಿನಲ್ಲಿ ಬಂದೆ. ಸರಿ ಆಯ್ತು, ಅವರು ಕಾಯ್ತಾ ಇದ್ದಾರೆ. ಮತ್ತೆ ಸಿಗ್ತೀನಿ’. ಎಂದು ತನಗೆ ಹೇಳಬೇಕಾದದ್ದನ್ನೆಲ್ಲಾ ಒಂದೇ ಉಸಿರಿನಲ್ಲಿ ಹೇಳಿ, ಹೊರಟೇ ಬಿಟ್ಟಳು. ನಾನು ಬಿಟ್ಟ ಕಣ್ಣು ಬಿಟ್ಟಂತೆ ಅವಳನ್ನು ನೋಡುತ್ತಲೇ ನಿಂತಿದ್ದೆ.

    ಅವಳು ನಿರರ್ಗಳವಾಗಿ ಅವಳ ಬಗ್ಗೆ ಹೇಳಿ, ಮರು ಮಾತಿಗೂ ಕಾಯದೆ ಅವಸರದಲ್ಲಿ ಹೊರಟಾಗ, ಅವಳ ಮಾತುಗಳು ನನಗೆ ಶೋಕಿಯ ಮಾತಾಗಿ ಕಾಣಿಸಲಿಲ್ಲ. ಬದಲಿಗೆ ನನ್ನ ಕಣ್ಣುಗಳಲ್ಲಿ ಸಂತಸದ ನಗು ಚಿಮ್ಮಿತು. ಅವಳ ಮೊಗದ ಆ ಖುಷಿ ನನ್ನ ಜಾತ್ರೆ ನೋಡಿದ ಖುಷಿಯನ್ನು ಇಮ್ಮಡಿಗೊಳಿಸಿತು.

    ಊರ ದೇವಸ್ಥಾನದಿಂದ ಮನೆಗೆ ನಡೆದುಕೊಂಡು ಹೋಗಲು ನಿರ್ಧರಿಸಿದೆ. ದಾರಿ ಉದ್ದಕ್ಕೂ ಶಾರದಾಳ ಯೋಚನೆಗಳು ನನ್ನ ನಾನೇ ಮರೆತು ಸಾಗುವಂತೆ ಮಾಡಿದವು. ಏನೂ ಬದಲಾವಣೆ ಇರಲಿಲ್ಲ ಅವಳಲ್ಲಿ. ಸುಮಾರು ಮೂವತ್ತೈದು ವರ್ಷದ ಹಿಂದೆ ಹೇಗಿದ್ದಾಳೋ, ಈಗಲೂ ಹಾಗೆಯೇ ಇದ್ದಾಳೆ. ಅಡಿಕೆ ಮರದಂತೆ ಎತ್ತರದ, ಸಣಕಲು ದೇಹ. ಇಡೀ ದೇಹದಲ್ಲಿ ಮೂಳೆಗಳದ್ದೇ ರಾಜ್ಯಭಾರ. ಮಾಂಸ ಖಂಡಗಳ ಕೊರತೆ ಎದ್ದು ಕಾಣುತ್ತಿತ್ತು. ಮದುವೆ ಎನ್ನುವುದು ಶಾರದಾ ಬದುಕಿನ ಬಹು ವರ್ಷದ ಕನಸ್ಸು. ಒಬ್ಬೊಬ್ಬರು ಒಂದೊಂದು ಕನಸ್ಸು ಕಾಣುತ್ತಾರೆ, ಆದರೆ ಶಾರದಾ ತನ್ನ ಮದುವೆಯೇ ಜೀವನದ ಸಾರ್ಥಕತೆಯ, ಮರುಹುಟ್ಟಿನ ಘಳಿಗೆ ಎನ್ನುವಂತೆ ಕನಸ್ಸು ಕಂಡಿದ್ದಳು. ಆ ಕನಸ್ಸು ನನಸ್ಸಾಗಿದ್ದು ಅವಳ ೫೩ನೇ ವಯಸ್ಸಿನಲ್ಲಿ.

    ಶಾರದಾ ಮನೆ ಇರುವುದು ನಮ್ಮ ಮನೆಯಿಂದ ಎರಡು ಗದ್ದೆ ಆಚೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಶಾರದಾ ತಾಯಿ ಮತ್ತು ತಮ್ಮನೊಂದಿಗೆ ಬೆಳೆದಳು. ಅವಳು ನನಗಿಂತ ಹತ್ತು ವರ್ಷವಾದರೂ ದೊಡ್ಡವಳು. ನನಗೆ ನೆನಪಿದ್ದ ದಿನಗಳೆಂದರೆ ಅವಳಿಗೆ ಆಗ ಸುಮಾರು ಹದಿನಾರು ವರ್ಷ. ಆಗಲೂ ಅವಳು ಹೀಗೆ, ಎತ್ತರದ ಸಣಕಲು ಜೀವ. ಸ್ವಾವಲಂಬಿಯಾದ ಶಾರದಾ ಆಗಲೇ ತೊಟದಲ್ಲೇ ಇರುವ ಹತ್ತಿ ಗಿಡದಿಂದ ದೇವರ ದೀಪ ಹಚ್ಚುವ ಬತ್ತಿಗಳನ್ನು ಮಾಡುವುದು, ದನ ಸಾಕಿ ಹಾಲು ಮಾರುವುದು, ಗದ್ದೆ ಬೇಸಾಯ, ಹೀಗೆ ಹಲವು ಕೆಲಸಗಳನ್ನು ಮಾಡುತ್ತಾ ಸಂಸಾರದ ನೊಗ ಹೊತ್ತಿದ್ದಳು. ತಾನು ಶಾಲೆಯ ಮೆಟ್ಟಿಲು ಹತ್ತದಿದ್ದರೂ, ಕಷ್ಟ ಪಟ್ಟು ತಮ್ಮನನ್ನು ಓದಿಸುತ್ತಿದ್ದಳು. ಹೀಗೆ ಬಡತನ, ಬದುಕಿನ ಕಷ್ಟದ ದಿನಗಳು ಶಾರದಾಳ ಬಾಲ್ಯ, ಹದಿಹರೆಯ ದಿನಗಳನ್ನು ನುಂಗಿ ಹಾಕಿತ್ತು. ಅವಳು ಮದುವೆಯ ವಯಸ್ಸಿಗೆ ಬಂದಾಗ ನಾನಿನ್ನೂ ಹೈಸ್ಕೂಲು ಓದುತ್ತಿದ್ದೆ. ಪ್ರತಿದಿನ ಮನೆಯಲ್ಲಿ ಬರೇ ಕಷ್ಟಗಳನ್ನೇ ಕಂಡ ಶಾರದಾಳಿಗೆ ತಾನು ಮದುವೆ ಆಗಬೇಕು, ತನ್ನ ಗಂಡ ತನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳಬೇಕು ಎಂದು ಜಪ ಮಾಡುತ್ತಿದ್ದಳು ಹಾಗೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ತನಗೆ ಮುಂದೆ ನಿಂತು ಗಂಡು ನೋಡಿ, ಮದುವೆ ಮಾಡಿಸುವವರಿಲ್ಲ ಎನ್ನುವುದು ಒಂದು ಕೊರಗಾದರೆ, ತಾನು ನೋಡಲು ಬಹಳ ತೆಳ್ಳಗೆ ಇದ್ದೇನೆ ಅನ್ನುವುದು ಅವಳಿಗಿದ್ದ ಇನ್ನೊಂದು ಬಹುದೊಡ್ಡ ಕೊರಗು. ಹಾಗಾಗಿ ಮನೆಯ ಬಳಿಯಲ್ಲಿ ಇದ್ದ ವೈದ್ಯರ ಬಳಿ ಹೋಗಿ ಯಾವಾಗಲೂ ತನಗೆ ಮುಖದಲ್ಲಿ ರಕ್ತ ಹೆಚ್ಚಾಗಲು ಟಾನಿಕ್ ಕೊಡಿ, ಹಸಿವು ಹೆಚ್ಚಿಸುವ ಟಾನಿಕ್ ಕೊಡಿ ಎಂದು ತಂದು ಕುಡಿಯುತ್ತಿದ್ದಳು. ಕುಡಿದ ಒಂದು ವಾರಕ್ಕೆ ನಮ್ಮ ಮನೆಗೆ ಬಂದು, ‘ಏ ಸವಿತಾ.. ನೋಡು ನನ್ನ ಮುಖದಲ್ಲಿ ಈಗ ರಕ್ತ ಆಗಿದೆ, ನನ್ನ ಕುತ್ತಿಗೆಯ ಹೊಂಡ ತುಂಬುತ್ತಿದೆ ಅಲ್ವಾ? ನನ್ನ ನೋಡಲು ಮುಂದಿನ ವಾರ ವರ ಬರುತ್ತಿದ್ದಾನೆ’ ಎಂದು ಹೇಳಿ ಇನ್ನಷ್ಟು ಬೀಗುತ್ತಿದ್ದಳು. ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಅವಳು ಬಂದು ಇದನ್ನೇ ಹೇಳುತ್ತಿದ್ದಳು. ಆ ವೈದ್ಯರು ಅವಳಿಗೆ ಅದಾವ ಟಾನಿಕ್ ಕೊಡುತ್ತಿದ್ದರೋ ನಾನು ಅರಿಯೆ. ಆದರೆ ಅವಳಲ್ಲಿ ನಾನೆಂದೂ ಯಾವ ಬದಲಾವಣೆಯೂ ಕಾಣದಿದ್ದರೂ ಅವಳ ಸಂತೋಷಕ್ಕೆ ‘ಹೌದು ಶಾರದಾ ನೀನು ಸ್ವಲ್ಪ ದಪ್ಪ ಆಗಿದ್ದೀಯಾ’ ಎನ್ನುತ್ತಿದ್ದೆ. ಹಾಗೆಯೇ ಎಂದೂ ಅವಳನ್ನು ನೋಡಲು ಬರುವ ವರ ಬಂದಿದ್ದು ನಾನು ಕಾಣಲಿಲ್ಲ. ಸದಾ ತನ್ನ ಭ್ರಮಾ ಲೋಕದಲ್ಲಿ ಇರುತ್ತಿದ್ದ ಶಾರದಾಳನ್ನು ನೆನೆದಾಗಲ್ಲೆಲ್ಲಾ ನನ್ನ ಮನ ಮರುಗುತ್ತಿತ್ತು.

    ತನ್ನ ಕನಸಿನ ಲೋಕದಲ್ಲಿ ಅವಳ ಯೌವನದ ಹಲವು ವರ್ಷಗಳನ್ನು ಕಳೆದಳು. ಅನಂತರದ ಒಂದಿಷ್ಟು ಸಮಯ ತನ್ನ ಕನಸ್ಸುಗಳನ್ನು ಬದಿಗಿಟ್ಟು ತನ್ನ ತಮ್ಮನ ಭವಿಷ್ಯವನ್ನು ಸಧೃಡಗೊಳಿಸುವತ್ತ ಯೋಚಿಸಿ, ಚಿಕ್ಕದೊಂದು ಅಂಗಡಿಯನ್ನು ಆರಂಭಿಸಲು ತಮ್ಮನಿಗೆ ಬೆನ್ನೆಲುಬಾಗಿ ನಿಂತಳು. ಆಗ ಸ್ವಲ್ಪ ನಿರಾಳವಾಯಿತು ಎಂದುಕೊಳ್ಳುವುದರಲ್ಲಿ ತಾಯಿ ಅನಾರೋಗ್ಯದಿಂದ ನಿಧನ ಹೊಂದಿದರು. ತಾಯಿಯ ನಿಧನ ಶಾರದಾಳನ್ನು ಮತ್ತಷ್ಟು ಒಂಟಿಯಾಗಿಸಿತು.

    ಹೀಗೆ ದಿನ ಕಳೆದಂತೆ ಒಂದು ದಿನ ತಮ್ಮನ ದುಶ್ಚಟಗಳ ಅನಾವರಣವಾಯಿತು. ತಮ್ಮ ಸಾಲಗಳ ಸರದಾರ ಎಂಬುದು ಅರಿವಾಗಿದ್ದು, ಅವರ ಮನೆ ಮುಂದೆ ಅಂದು ಸಾಲಕೊಟ್ಟವರು ಬಂದು ನಿಂತಾಗಲೇ. ಕೈಯಲ್ಲಿ ಕೂಡಿಟ್ಟ ಕಾಸಿಲ್ಲದ ಶಾರದಾ, ಹೇಗೋ ಹೊಟ್ಟೆ ಬಟ್ಟೆಗೆ ತೊಂದರೆ ಇರಲಿಲ್ಲ ಎನ್ನುವಾಗ ಎರಗಿದ ಈ ಆಘಾತ ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಸಾಲಗಾರರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಒಂದು ದಿನ ಎಲ್ಲದರಿಂದ ಬೇಸತ್ತ ಶಾರದಾ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಕುಣಿಕೆಯನ್ನು ಬಿಗಿಗೊಳಿಸುವ ಕೊನೆಯ ಸೆಕೆಂಡಿನಲ್ಲಿ ಅವಳಿಗೆ ಅವಳೇ ಸ್ಪೂರ್ತಿಯಾಗಿ, ‘ಇಲ್ಲಾ… ತಾನು ಸಾಯಬಾರದು, ಬದುಕಿ ನನ್ನಂಥ ಒಂಟಿ ಮಹಿಳೆಯರ ಹೋರಾಟಕ್ಕೆ ಮಾದರಿ ಸ್ತ್ರೀ ಆಗಬೇಕು’ ಎಂದು ಸಾವಿನ ನಿರ್ಧಾರವನ್ನು ಕೈ ಬಿಟ್ಟಳು. ಮರುದಿನವೇ, ಇದ್ದ ಒಂದು ಗದ್ದೆಯನ್ನು ಮಾರಿ ತಮ್ಮನ ಸಾಲದ ಹೊರೆಯನ್ನು ತೀರಿಸಲು ನಿರ್ಧಾರ ಮಾಡಿ, ಸಾಲ ಮುಕ್ತಳಾದಳು.

    ಕಾಲಚಕ್ರ ಉರುಳಿತು. ನನಗೂ ಮದುವೆಯಾಯಿತು, ಮಕ್ಕಳಾಯಿತು. ಮಕ್ಕಳೊಂದಿಗೆ ನಾನು ಊರಿಗೆ ಹೋದಾಗಲೂ ಶಾರದಾ ಮಾತ್ರ ಬದಲಾಗಲೇ ಇಲ್ಲ. ಆಗಲೇ ಅವಳ ವಯಸ್ಸು ಸುಮಾರು ನಲವತ್ತೈದು- ನಲವತ್ತಾರು ಆಗಿತ್ತು. ಆಗಲೂ ಅವಳು ಮುಂಚೆಯಂತೆಯೇ ‘ಹೇ ಸವಿತಾ… ನಾನು ಈ ಸಾರಿ ಸ್ವಲ್ಪ ದಪ್ಪ ಆಗಿದ್ದೇನೆ ಅಲ್ವಾ?, ಮುಂದಿನ ವಾರ ನನ್ನ ನೋಡಲು ವರ ಬರುತ್ತಾನೆ, ತಮ್ಮ ಹೇಳಿದ್ದಾನೆ’ ಎಂದು ಉತ್ಸಾಹದ ದನಿಯಲ್ಲಿ ಹೇಳುತ್ತಿದ್ದಳು. ಇದನ್ನು ಕೇಳಿ ‘ಶಾರದಾಳ ಜೀವನ ಎಂದು ಸರಿ ಹೋಗುವುದು ದೇವರೇ’ ಎಂದು ಬಹಳ ಬೇಸರಪಡುತ್ತಿದ್ದೆ.

    ಸ್ವಲ್ಪ ವರ್ಷಗಳ ನಂತರ ಅಂದರೆ ಅವಳ ೫೩ನೇ ವಯಸ್ಸಿನಲ್ಲಿ ಕೊನೆಗೂ ಅವಳ ಮದುವೆಯ ಮುಹೂರ್ತ ಕೂಡಿ ಬಂತು. ನಾನು ದೂರದ ಊರಲ್ಲಿ ಇದ್ದ ಕಾರಣ ನನಗೆ ಮದುವೆಗೆ ಹೋಗಲು ಆಗಲಿಲ್ಲ. ನನ್ನ ಅಮ್ಮ ಶಾರದಾಳ ಮದುವೆಯ ಸುದ್ದಿ ನನಗೆ ಪೋನಾಯಿಸಿ ಹೇಳಿದಾಗ ಬಹಳ ಸಂತಸವಾಯಿತು. ಶಾರದಾ ಸ್ವಾವಲಂಬಿ ಹಾಗೂ ಛಲಬಿಡದೆ ಬದುಕಿನ ಪ್ರತಿ ಕ್ಷಣವನ್ನು ಹೋರಾಡಿ ಗೆದ್ದ ಒಬ್ಬ ದಿಟ್ಟ ಹೆಣ್ಣು. ಅವಳ ಮುಂದಿನ ಜೀವನವಾದರೂ ಸುಖಮಯವಾಗಿರಲಿ ಎಂದು ನಾನಿದ್ದ ಜಾಗದಲ್ಲೇ ದೇವರನ್ನು ಬೇಡಿಕೊಂಡೆ.

    ಹೀಗೆ ಶಾರದಾಳ ನೆನಪಿನ ದೋಣಿಯಲ್ಲಿ ಸಾಗಿ ಬಂದ ನನಗೆ ಮನೆ ತಲುಪಿದ್ದೇ ಅರಿಯಲಿಲ್ಲ. ಮನೆಗೆ ಬಂದವಳೆ ಜಾತ್ರೆಯ ಬಗೆ ಬಗೆಯ ತಿಂಡಿಗಳು ಹೊಟ್ಟೆ ಸೇರಿದವು. ಮತ್ತೆ ಊಟದ ಆಲೋಚನೆಯೂ ಬರುವುದರೊಳಗೆ ನಿದ್ದೆಗೆ ಜಾರಿದೆ.

  • ಹಣ್ಣೆಲೆಯ ಹಿನ್ನೋಟ

    ನಾನೊಂದು ಹಣ್ಣೆಲೆ. ನನ್ನವರೊಂದಿಗೆ ನನ್ನದಿಂದು ಕೊನೆಯ ದಿನ. ಮರದಿಂದ ಕಳಚಿ ಧರೆಗುರುಳುವ ದಾರಿಯಲ್ಲಿ, ಕೊನೆಯ ದೀರ್ಘ ಉಸಿರನೆಳೆಯುವ ಘಳಿಗೆಯಲ್ಲಿ, ಜೀವನದ ಹಿನ್ನೋಟದ ಕೆಲವು ತುಣುಕುಗಳು ಕಣ್ಣಮುಂದೆ ಬರತೊಡಗಿದೆ.

    ನಮ್ಮದು ಬಹಳ ಪುರಾತನ, ದೊಡ್ಡ ತುಂಬು ಕುಟುಂಬ. ನಾವೆಲ್ಲರೂ ಇಲ್ಲಿ ಒಟ್ಟಾಗಿ ಒಗ್ಗಟ್ಟಿನಿಂದ ಬಾಳುತ್ತಿದ್ದೆವು. ನಮ್ಮಲ್ಲಿನ ಸಮಾನತೆ ಮತ್ತು ಸಹಬಾಳ್ವೆ ಬಣ್ಣಿಸಲು ಅಸಾಧ್ಯ. ಅಂದು ನಾನು ಹುಟ್ಟಿದ ದಿನ ನಮ್ಮ ಮನೆಯಲ್ಲಿ ಎಲ್ಲರ ಮುಖ ಹರ್ಷದಿಂದ ಹೊಳೆಯುತ್ತಿತ್ತು. ಎಲ್ಲೆಲ್ಲೂ ಹಬ್ಬದ ಸಡಗರ, ಹಸಿರು ತೋರಣ, ಚಪ್ಪರ ಹಾಸಿತ್ತು. ರವಿಯ ರಶ್ಮಿ ನನ್ನ ಮೇಲೆ ಬಿದ್ದಾಗ ಮೈಯೆಲ್ಲಾ ಪುಳಕಿತವಾಗಿ ಇನ್ನಷ್ಟು ಪುಟಿದೆದ್ದಿದ್ದೆ. ಮೊಗ್ಗಿನಂತೆ ಇದ್ದ ನಾನು ದಿನ ಕಳೆದಂತೆ ಹಿಗ್ಗುತ್ತಾ ಚಾಚಿ ಬೆಳೆದೆ. ಗಾಳಿ, ಬೆಳಕು, ನೀರು ನಾಡಿಯ ಜೀವದ್ರವ್ಯವಾಗಿತ್ತು.

    ನಾವಷ್ಟೇ ಅಲ್ಲದೆ, ಅದೆಷ್ಟೋ ಇತರೆ ಜೀವಿಗಳು ನಮ್ಮ ಮನೆಮನಗಳಲ್ಲಿ ಆಶ್ರಯ ಪಡೆದಿದ್ದವು. ಮೊದಮೊದಲು ಇರುವೆ, ಲೋಳೆಹುಳುಗಳು, ಇತರೆ ಕೀಟಗಳು ನನ್ನ ಮೇಲೆ ಓಡಾಡುವಾಗ ತುಂಬಾ ಕಚಗುಳಿಯ ಅನುಭವವಾಗುತ್ತಿತ್ತು. ನಂತರದ ದಿನಗಳಲ್ಲಿ ಅವುಗಳ ತಿರುಗಾಟ ಅಭ್ಯಾಸವಾಗುತ್ತಾ ಬಂತು. ಹಲವು ಬಾರಿ ಪುಟ್ಟ ಪುಟ್ಟ ಜೀವಿಗಳು ನನ್ನ ಹಿಂದೆ ಬಚ್ಚಿಟ್ಟುಕೊಂಡು ಅವುಗಳ ಜೀವ ರಕ್ಷಣೆ ಮಾಡಿಕೊಂಡ ಕ್ಷಣಗಳು ಇನ್ನೂ ಕಣ್ಣು ಕಟ್ಟಿದಂತಿದೆ.

    ಮಳೆ ಬಂದಾಗ ನನಗೆ ಹರುಷವೋ ಹರುಷ. ಮಳೆಯಲ್ಲಿ ಮೈಯಲ್ಲಿದ್ದ ಧೂಳು, ಹೊಗೆ ಎಲ್ಲಾ ಕೊಚ್ಚಿ ಹೋಗಿ, ಇನ್ನಷ್ಟು ಹೊಳೆಯುತ್ತಿದ್ದೆ. ಮಳೆ ಹನಿಗಳು ನಮ್ಮವರನ್ನೆಲ್ಲರನ್ನೂ ನೃತ್ಯ ಮಾಡಿಸುತ್ತಿತ್ತು. ದುಂಬಿ, ಕೋಗಿಲೆಗಳ ಸಂಗೀತೋತ್ಸವ ನಮ್ಮ ಕುಣಿತಕ್ಕೆ ಇನ್ನಷ್ಟು ಮೆರುಗು ಕಟ್ಟುತ್ತಿದ್ದ ದಿನಗಳು ಮರೆಯಲು ಸಾಧ್ಯವೇ ಇಲ್ಲ. ಪತಂಗಗಳು ಮಕರಂದ ಹೀರಲು ಬಂದಾಗ, ಆಗೊಮ್ಮೆ ಈಗೊಮ್ಮೆ ರೆಕ್ಕೆಯಲ್ಲಿ ಬಡಿದು ನನ್ನ ಮಾತನಾಡಿಸಿ ಹೋಗುತ್ತಿತ್ತು. ಕುಟುಕು ತರಲು ತಾಯಿ ಹಕ್ಕಿ ಗೂಡಿಂದ ಹಾರಿ ಹೋದಾಗ, ಆಗ ತಾನೇ ಕಣ್ಣು ತೆರೆದ ಮರಿ ಹಕ್ಕಿಗಳಿಗೆ ಭಯವಾಗದಂತೆ ನಾನು ಜೊತೆಯಾಗಿ, ನನ್ನ ನಾನೇ ಬೀಸಣಿಗೆ ಮಾಡಿ ತಂಗಾಳಿಯ ಬೀಸುತ್ತಿದ್ದೆ.

    ಸೂರ್ಯನ ಕಿರಣ, ಗಾಳಿ, ನೀರಿನೊಂದಿಗಿನ ಪ್ರತಿದಿನದ ಜುಗಲ್ ಬಂದಿಗೆ ಇಂದು ನನ್ನ ಕೊನೆಯ ರಾಗ. ನನ್ನುಳಿದ ಸಾರವನ್ನು ಮಣ್ಣೊಳಗೆ ಸೇರಿಸಿ, ಮಣ್ಣಿನ ಋಣವನ್ನು ತೀರಿಸ ಹೊರಟಿರುವೆ. ಹಣ್ಣೆಲೆಯಾದ ನಾನು, ಚಿಗುರೆಲೆಗೆ ಚಿಗುರಲು ಎಡೆ ಮಾಡಿ ಕೊಡಬೇಕಾದದ್ದು ನನ್ನ ಕರ್ತವ್ಯ. ಬದುಕಿನ ಪ್ರತಿ ಕ್ಷಣವೂ ಬಹಳ ಸಂತಸದಿಂದ, ತೃಪ್ತಿಯಿಂದ ಅಳಿಲು ಸೇವೆಯೊಂದಿಗೆ ಕಳೆದಿದ್ದೇನೆಂಬ ನೆಮ್ಮದಿಯ ಉಸಿರಿನಿಂದ ಧರೆಗುರುಳುತ್ತಿದ್ದೇನೆ.

  • ಹೇಳಲಾರೆ ಕಾರಣ

    “ಹೇಳಿ ಹೋಗು ಕಾರಣ, ದೂರ ಹೋಗುವ ಮೊದಲು” ಎಂದ ನಿನಗೆ, ನನ್ನ ಪ್ರೀತಿಪೂರ್ವಕ ಉತ್ತರ.

    ಏನ ಹೇಳಲಿ ಕಾರಣ,

    ನಿನ್ನ ತೊರೆದ ಈ ಮನ.

    ಹಲವು ಕಾರಣಗಳಿತ್ತು,

    ಇರಲು ನಿನ್ನೊಂದಿಗೆ ಬೆರೆತು.

    ಪದೇ ಪದೇ ಹುಡುಕಿ ಸೋತೆ,

    ನಮ್ಮೊಳಗಿನ ಕೊರತೆ.

    ಸಿಕ್ಕಿದ್ದು, ಬರೀ ಪ್ರೀತಿಯ ಕಂತೆ ಕಂತೆ.

    ಚಿಂತೆ ಮರೆಸಿ, ಪ್ರೀತಿ ಬೆರೆಸಿ,

    ಬೆಳೆಸಿದ್ದ ಸಸಿ,

    ಸಣ್ಣ ಸಣ್ಣ ವಿರಸದಿಂದ,

    ಮನದ ಮಾತಿನಂತರಗಳಿಂದ,

    ಮೊಗ್ಗು ಬಿರಿವ ಮೊದಲು,

    ಕುಗ್ಗಿ ಬಾಡಿತು ಒಲವು.

    ಮರಿಚಿಕೆಯಾಯ್ತು ಪ್ರೀತಿಯಂಬಾರಿಯ ಚೆಲುವು.

    ಬತ್ತಿರುವ ದೀಪ, ಮುರಿದಿರುವ ಕೊಳಲು.

    ಹೇಗೆ ಹೆಣೆಯಲಿ ಹಸಿ ನೋವ ಅಳಲು.

    ಕವಿದ ಕತ್ತಲ ಕರಗಿಸಲಾರೆ,

    ಸಂತಸದ ಸಂಗೀತಕ್ಕೆ ಶೃುತಿ ಸೇರಿಸಲಾರೆ.

    ಮತ್ತೆ ಮತ್ತೆ ಕೆದಕಬೇಡ,

    ಈ ಅಗಲಿಕೆಯ ಕಾರಣದ ಗೂಡ.

    ಸಾಗು ನೀ ಹಿಡಿದು, ಹೊಸ ಬದುಕ ಜಾಡ.

    ಸಿಗುವೆ ಮುಂದೆಂದಾದರೂ ಈ ಬಾಳ ಬಂಡಿಯಲಿ,

    ಸಿಕ್ಕಾಗ ನಿನ್ನ ಮೊಗದಿ ನನಗೊಂದು ನಗುವಿರಲಿ.

  • ಚಿಣ್ಣರ ‌ಬ‌ಣ್ಣ

    ಚಿಣ್ಣರ ಲೋಕದಲ್ಲೊಂದು ಬಣ್ಣದ ಹಾಡಿನೊಂದಿಗೆ ಪಯಣ.

    ಬಣ್ಣಗಳಾಟ ಬಲು ಚೆಂದ,

    ಮಕ್ಕಳಿಗಂತೂ ಆನಂದ.

    ಕುಂಚದಿ ಚಿತ್ರಕೆ ಕಚಗುಳಿ,

    ಬಣ್ಣದ ರಂಗಿನ ಓಕುಳಿ.

    ಕಾಮನ ಬಿಲ್ಲಿನ ಮೇಲೇಳು,

    ವರ್ಣಕೆ ವರುಣನ ನಂಟ್ಹೇಳು.

    ಚಿಟ್ಟೆಗೆ ರೆಕ್ಕೆಲಿ ರಂಗೋಲಿ,

    ಬಿಡಿಸಿದ ಕಲೆಗಾರನು ಎಲ್ಲಿ?

    ಹೂಗಳ ಮೇಲೆ ಬಣ್ಣವ ಚೆಲ್ಲಿ

    ದುಂಬಿಯ ದಂಡನು ಸೆಳೆದನು ಇಲ್ಲಿ.

    ಸೃಷ್ಟಿಯ ತುಂಬಾ ಬಣ್ಣದ ತೋರಣ,

    ಕಾಣುವ ಕಣ್ಣಿಗೆ ಹಬ್ಬದ ಹೂರಣ.

  • ಕನ್ಯಾದಾನ

    ನನ್ನ ಮುದ್ದಿನ ಕೂಸಿನ

    ಕನ್ಯಾದಾನವು ನಾಳೆ.

    ಊಹಿಸಲಾಗದು ಈ ಮನೆ

    ಸದ್ದಿಲ್ಲದ ಹೆಜ್ಜೆ-ಗೆಜ್ಜೆ, ಕೈ ಬಳೆ.

    ನೀ ಹಚ್ಚದ ಮುಸ್ಸಂಜೆಯ

    ದೀಪಕೆಲ್ಲಿಯ ಕಳೆ…

    ಇಂದೇ ಬೇಸರದಿ ಬಾಡಿ

    ಕೂತಿವೆ ನಮ್ಮನೆಯ ತೆಂಗು-ಬಾಳೆ.

    ಹೋದ ಮನೆಯಲ್ಲೂ ಸುರಿಸೇ

    ಹರುಷದ ಹೂಮಳೆ.

    ಧಾರೆ ಎರೆದು ಕಳುಹಿಸಲಿರುವೆ

    ನಿನ್ನ ನಾನು ಮಗಳೇ.

    ಮರೆಯದೇ ಬರೆಯುತ್ತಿರು ಆಗಾಗ

    ಈ ತಂದೆಗೊಂದು ಓಲೆ.

  • ಕಾದಿರುವೆ

    ನೀನಿರದೆ ಈ ವಿರಹ

    ಹತ್ತಿಹುದು ಬೆಂಕಿ ತರಹ

    ಸುಟ್ಟಿಹುದು ನನ್ನೀ ದೇಹ

    ಕಳಚಿಹುದು ಜಗದೆಲ್ಲಾ ಮೋಹ.

    ತುಟಿ ಬಿರಿವ ಮೊದಲೆ ನಿನ್ನ ಮನಕೆ

    ಅರಿಯುತ್ತಿತ್ತು ನನ್ನೆಲ್ಲಾ ಬಯಕೆ

    ಈಗೇಕೆ ಮೌನ ಹೊದಿಕೆ

    ಸರಿಸಿ ಕೇಳೇ ಈ ಕೋರಿಕೆ.

    ಪ್ರತಿ ಕ್ಷಣವೂ ನೆನೆಯುತ್ತಿರುವೆ

    ನಿನ್ನದೆ ದಾರಿ ಕಾದಿರುವೆ

    ಹೆಜ್ಜೆ-ಗೆಜ್ಜೆಯ ಸದ್ದನೇ ಆಲಿಸುತ್ತಿರುವೆ

    ಕಾಣಲಿಲ್ಲ ನಿನ್ನ ಆಗಮನದ ಸುಳಿವೇ…..