Author: ನಮ್ರತಾ ಶೆಟ್ಟಿ

  • ಕಾಂತಾರ ನನ್ನ ಪದದಲ್ಲಿ

    ಕಾಂತಾರ ಕಂಡೆ. ಕಣ್ಣಿಗಷ್ಟೇ ಅಲ್ಲ ಮನಸ್ಸಿಗೂ ಹಬ್ಬವಾಯ್ತು. ಕಂಡ ಗುಂಗಿನ್ನೂ ಇಳಿದಿಲ್ಲ. ಇಳಿಯುವ ಛಾಯೆಯೂ ಇಲ್ಲ. ಇದರ ಮಧ್ಯದಲ್ಲಿ 4 ಸಾಲು ಬರೆಯದಿರಲು ಮನಸ್ಸು ಒಪ್ಪಿಲ

    ಕಳೆಗುಂದಿದ ಬದುಕಿಗೆ,
    ಕಲೆ ಕಟ್ಟಿದ ಕಲ್ಲಿಗಾಗಿ
    ಬೆಲೆ ತೆತ್ತ ಮಣ್ಣನು,
    ಮರಳಿ ಕೇಳಿದ ಮರುಳನ

    ಮೆಟ್ಟಿನಿಂತ ದೈವದ ಮಹಿಮೆ ಅರಿಯದ ಕುಡಿಯು,
    ಗಡಿ ಪಾಲಕನ – ಪಡಿ ರಕ್ಷಕನ ಶಕ್ತಿಯ ಮೀರಿದ,
    ಯುಕ್ತಿ ಪ್ರದರ್ಶನದ ಭ್ರಮೆಯಲಿ,
    ಕಾರಣಿಕನೆದುರು ನಾ ತೃಣಕ್ಕೆ ಸಮವೆನ್ನುವುದ ಮರೆತ.

    ಪ್ರಕೃತಿಯ ಸೃಷ್ಟಿಯಲಿ ನಾನೊಂದು ಭಾಗ
    ಎಂದವನಿಗಷ್ಟೇ ಇಲ್ಲಿರುವುದು ಜಾಗ.
    ಮಣ್ಣಿನ ಮೋಹಕ್ಕೆ ಸ್ವಾರ್ಥವ ಮೆರೆದರೆ,
    ಬಸ್ಮವಾಗಿಸಿ ತನ್ನುದರವ ಸೇರಿಸಿಕೊಳ್ಳವುದು ಈ ಧರೆ‌.

  • ಕಾಂತಾರ

    “ಕಾಂತಾರ” ಕನ್ನಡ ಚಲನಚಿತ್ರದ ಟ್ರೈಲರ್ ನೋಡಿದಾಗ ನನ್ನ ಅನಿಸಿಕೆಯನ್ನು ಅಕ್ಷರರೂಪಕ್ಕೆ ತಂದಾಗ ಮೂಡಿದ ಸಾಲುಗಳು. ಕಾಂತಾರ ತಂಡದವರಿಗೆ ನನ್ನ ಅಭಿನಂದನೆಗಳು. ಬಹಳ ಅದ್ಭುತವಾಗಿ ಮೂಡಿಬಂದಿದೆ, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ.

    ಮೆರುಗಿನ ಕಾಡಿನ ನಡುವಲಿ ಒಂದು
    ಬೆರಗಿನ ಕಥೆಯನು ಹೇಳಲು ಎಂದು
    ಹೊರಟಿಹ ಕಾರಣಿಕನು ನಮ್ಮಯ ಬಂಧು.

    ಚಾಟಿಯ ಕೋವಿಯ ನರ್ತನದಾಟ
    ಕೆಸರಿನ ಗದ್ದೆಯ ಕಂಬಳದೋಟ
    ಹಸುರಿನ ನಡುವಲಿ ಮರಗಳ್ಳರ ಕಾಟ.

    ಆಳುವ ಅರಸನ ಕೇಳುವರಿಲ್ಲ
    ದರ್ಪದ ಧೋರಣೆಗೆ ಜಾಗವೇ ಇಲ್ಲ
    ಕಾಯುವ ದೈವವೇ ನಮಗೆಲ್ಲಾ.

    ಕತ್ತಲ ರಾತ್ರಿ ಬಿತ್ತಿಹ ಭೀತಿ
    ಪಂಜಿನ ದಂಡು ಹೊತ್ತಿಹ ರೀತಿ
    ಬೆಂದಿಹುದಿದರಲಿ ಜೋಡಿಹಕ್ಕಿಯ ಪ್ರೀತಿ.

  • ಹಿಂತಿರುಗು

    ನಿಂತಲ್ಲೇ ಇರುವೆ ನೀ ನಡೆದ ಮೇಲೂ
    ಮನಸ್ಸಿಲ್ಲದ ಮನಸ್ಸಿಂದ ಬೀಳ್ಕೊಟ್ಟ ನಾನು.

    ಮುಳುಗುವ ರವಿಗೂ ಮುನಿಸಾದಂತಿದೆ
    ತಣ್ಣನೆ ಗಾಳಿ ತಿಳಿ ಹೇಳಿದೆ
    ತಡೆದು ನಿಲ್ಲಿಸು ತುಸು ಮಾತಿನ್ನೂ ಇದೆ
    ಉಷೆ ಉರುಳಿ ಶಶಿ ಏರುವ ಹೊತ್ತಾಗಿದೆ
    ತಿಳಿ ಬಾನಿನಾರಂಗಿಯ ರಸದೂಟವು ಬಾಕಿ ಇದೆ.

    ಬಾಯ್ ಮಾತಿನ ನಿನ್ನೀ ನಿರಾಕರಣೆ
    ನಿನ್ನೊಳಗಿನ ನಾಚಿಕೆಗೆ ಉದಾಹರಣೆ
    ನನ್ನಿ ವೇದನೆಗೆ ನೀನಷ್ಟೇ ಹೊಣೆ
    ಪ್ರತಿ ಉಸಿರು ಕಾದಿದೆ ನಿನ್ನಪ್ಪುಗೆಯ ನಿವಾರಣೆ.

  • ಅಮೃತ ಮಹೋತ್ಸವ

    ಬಂಧ ಮುಕ್ತರು ನಾವು,
    ಆದರಿನ್ನೂ ಆರಿಲ್ಲ ದಾಸ್ಯದ ಕಾವು.

    ಪರಕೀಯರ ಗುಲಾಮಗಿರಿಯಿಂದ ಸಿಕ್ಕಿತು ಗೆಲುವು,
    ನಮ್ಮವರದೇ ದರ್ಪದಲಿ ನಾವಿನ್ನೂ ನಲುಗುತ್ತಿರುವ ಹೂವು.

    ನಿಸ್ವಾರ್ಥ ನಿಷ್ಠೆಯ ನೆತ್ತರ ಹರಿವಿನ ಫಲವು
    ಅದಕ್ಕಿಂದು ಅಮೃತ ಮಹೋತ್ಸವ ಸಂಭ್ರಮದ ಚೆಲುವು.

    ಕುಟ್ಟಿ ಕೆಡವ ಬೇಕಿದೆ ನಮ್ಮೊಳಗಿನ ಜಡವು,
    ಗಟ್ಟಿಗೊಳ್ಳಬೇಕಿದೆ ಭರತ ಪುತ್ರರ ದಿಟ್ಟ ಕನಸಿನ ನಿಲುವು.

    ಕಾಡಬೇಕಿದೆ ನಮ್ಮವರ ತ್ಯಾಗ ಬಲಿದಾನದ ಕಾರಣವು,
    ಮೂಡಬೇಕಿದೆ ಪ್ರಜಾಪ್ರಭುತ್ವದ ಮೂಲ ಮಂತ್ರದ ಅರಿವು.

  • ಇರುವಿಕೆಯ ಅರಿವು

    ನನ್ನಿರುವಿಕೆಯ ಮೂಲ ಕಾರಣವ ಮರೆತು; ಮೆರೆಯುತಿಹ ಮನುಜ ನಾನು. ಅರಿವು ಮಾಡು ತಾಯಿ; ನೊರೆಯಾರುವ ಮುನ್ನ. ಶರವೇಗದಿ ಓಡುವ ಜಗದೊಡನೆ ಸ್ಪರ್ಧಿಸಲು ನನಗೆ ಸರಿಸಾಟಿ ಯಾರಿಲ್ಲೆಂಬ ಅಹಂನಿಂದ ಮಂದ ಬೆಳಕಲ್ಲೂ, ಕಡುಕತ್ತಲಿನಲ್ಲೂ, ಹಚ್ಚ ಹಸುರಿನ ನಡುವೆ, ಬೆಟ್ಟ-ಗುಡ್ಡಗಳ ಕುಟ್ಟಿ ಕೆಡವಿ ಕಾಣದ ಕನಸ ಗೆಲ್ಲಲು ಓಡಿದ್ದೇನೆ. ಈ ಓಟದಲ್ಲಿ ಅದೆಷ್ಟೋ ಜೀವಿಗಳ ವಿನಾಶದ ಅಂಚಿಗೆ ಕಾರಣವಾಗಿದ್ದೇನೆ. ಇಂತಹ ಪಯಣದಲ್ಲಿ ಎಂದಾದರೊಮ್ಮೆ ಎಲ್ಲವನ್ನು ಗೆಲ್ಲುವೆನೆಂಬುದು ಬರಿಯ ನನ್ನ ಭ್ರಮೆ‌ ಅಷ್ಟೇ. ಇದು ವಿನಾಶದೆಡೆಗಿನ ಓಟವೇ ಹೊರತು ಗೆಲುವಿಗಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಇಲ್ಲಿ ಎಷ್ಟೋ ಬಾರಿ ಓಡಿ-ಓಡಿ ದಣಿದು ನಿಲ್ಲುವ ಪ್ರಯತ್ನ ಮಾಡಿ ವಿಫಲಗೊಂಡಿದ್ದೇನೆ. ಒಮ್ಮೆ ಎಲ್ಲಾದರೂ ನಿಂತರೆ ಹುಲ್ಲುಕಡ್ಡಿಯಂತಿಹ ನನ್ನನ್ನು ತುಳಿದು ಮಣ್ಣಾಗಿಸುವರೆಂಬ ಭಯದಿಂದ ಮತ್ತೆ ಮತ್ತೆ ಕುಂಟುತ್ತಾ, ಕುಂಟುತ್ತಾ ನಡೆದಿದ್ದೇನೆ.. ಓಡಿದ್ದೇನೆ…


    ಇನ್ನು ನನ್ನಿಂದಾಗದು ತಾಯಿ. ಮನಸ್ಸು ಒಪ್ಪುತ್ತಿಲ್ಲ. ಈ ಪಾಪದ ಓಟದ ಹಿನ್ನೋಟ ಮನಃಶಾಂತಿ, ಸ್ವಾಭಿಮಾನವನ್ನೆಲ್ಲಾ ಕಿತ್ತು ತಿನ್ನುತ್ತಿದೆ.ಪ್ರತಿ ಕ್ಷಣ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಈ ಎಲ್ಲದಕ್ಕೂ ಅಂತ್ಯ ಹಾಡಬೇಕಾಗಿದೆ. ಇಲ್ಲಿ ಮಣ್ಣಾಗುವ ಮೊದಲು ಬದುಕಿನ ನನ್ನ ಮೂಲ ಕರ್ತವ್ಯದ ಅರಿವು ಕಾಣಬೇಕಾಗಿದೆ. ಬರಿಯ ತಿಂದುಂಡು ಓಡಲು ಬಂದವಳಲ್ಲ ನಾನು ಎಂಬುದಂತೂ ಸತ್ಯ. ಹಾಗಾದರೆ ಮುಂದೇನು? ನನ್ನಿ ಬದುಕಿನ ಅಂತ್ಯದೊಳಗೆ ನನ್ನಿಂದ ಆಗಬೇಕಾದ ಕಾರ್ಯಗಳವುವು? ಖಂಡಿತವಾಗಿ ನಾನು ಈ ಭೂಮಿಯ ಮೇಲೆ ಹುಟ್ಟಿರುವುದು ಯಾವುದೋ ಒಂದು ಕಾರಣದಿಂದ ಎನ್ನುವುದು ಸತ್ಯವಾದರೆ ಆ ಕಾರಣ ಯಾವುದು ಎಂದು ಅರಿಯುವುದು ಹೇಗೆ? ಈ ಅರಿವಿಕೆಯ ಜ್ಞಾನ ನನ್ನಲ್ಲಿ ಮೂಡಿಸು ತಾಯಿ. ಭೌತಿಕ ಪ್ರಪಂಚದ ಹಗಲುಗನಸಿನಲ್ಲಿ ಬದುಕಿರುವ ನನಗೆ ಒಳಗಣ್ಣನ್ನು ತೆರೆದು ನೋಡುವ ಶಕ್ತಿ ಕೊಡು. ತಪ್ಪು ಸರಿಗಳ ವ್ಯತ್ಯಾಸ ತಿಳಿಸು. ಇಲ್ಲಿಯವರೆಗೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಹ ಯಾವ ಕಾರ್ಯವೂ ನನ್ನಿಂದಾಗಲಿಲ್ಲ. ಇನ್ನಾದರೂ ಆ ಮಾರ್ಗದೆಡೆಗೆ ನಾನು ನಡೆಯುವ ದಾರಿ ತೋರಿಸು. ಎಲ್ಲವನ್ನೂ, ಎಲ್ಲರನ್ನೂ ಕೆಡವಿ ಬದುಕಿದ್ದು ಸಾಕು. ಇನ್ನುಳಿದ ದಿನಗಳಾದರೂ ಉಳಿಸಿ, ಬೆಳೆಸುವ ಪಥದ ನಕ್ಷೆಗೆ ಪ್ರಥಮ ಹೆಜ್ಜೆ ಕೈಹಿಡಿದು ನಡೆಸು ತಾಯಿ.

  • ಜೋಳಿಗೆಯ ಜೋಗುಳ

    ಜಗವ ಸುತ್ತಿಸುವಳು ಜನನಿ

    ಜೋಳಿಗೆಯ ಜೋಲಿಯಲ್ಲಿ.

    ಜನಜಂಗುಳಿಯ ಜಂಕೆಯೇ

    ಜೋಗುಳದ ಹಾಡು ಇಲ್ಲಿ.

    ಪಲ್ಲಕ್ಕಿ-ಪಲ್ಲಂಗಕ್ಕೂ ಮಿಗಿಲು ಈ ನನ್ನ ತೊಟ್ಟಿಲು;

    ತೂಗುಯ್ಯಾಲೆಯ ಸಂಚಾರದಲೆ ಗತ್ತು-ಗಮ್ಮತ್ತು.

    ಬತ್ತಿರುವ ಎದೆಯಲ್ಲೂ ಒಸರುವ

    ಎದೆಹಾಲಿನಮೃತದ ಸವಿ ನನ್ನದೇ ಸ್ವತ್ತು.

    ಇಣುಕಿಣುಕಿ ಜೋಳಿಗೆಯ ಕಿಟಕಿಯಲಿ

    ನುಸುಳುವ ರವಿಮಾಮನ ಕಚಗುಳಿ.

    ಧಗೆತಾಗದಂತೆ, ಸೆಕೆಯಾರಿಸಲೆಂದೇ

    ಮತ್ತೆ ಮತ್ತೆ ಮುತ್ತಿಕ್ಕುವ ಸಿಹಿಗಾಳಿ.

    ರಾಜಯೋಗವ ಮೀರಿಸುವ ಯೋಗವಿದು;

    ಹಸಿದೊಡನೆ ಹಾಲು, ಬಯಸಿದಾಗೆಲ್ಲ ಮಡಿಲು.

    ಮರೆಸಿಹುದು ಮಾಸಿದ ಜೋಳಿಗೆಯ ಘಮವ;

    ಮೆರವಣಿಗೆಯಲಿ ತಾಯಿ ನಿನ್ನುಸಿರ ನೆರಳಿರಲು.

    ಬದುಕಿನ ಬಂಡಿ ನಡೆಸಲು ಬೀದಿಬೀದಿಯಲ್ಲಿ ತಾಯಿ ತನ್ನ ಮಗುವನ್ನು ಜೋಳಿಗೆಯಲ್ಲಿ ಹೊತ್ತು ತಿರುಗುವಾಗ, ಜೋಳಿಗೆಯೊಳಗೆ ಮಗುವಿನ ಅನುಭವ ಹೀಗಿರಬಹುದೇ ???

  • ಯುದ್ಧ

    25th March 2022 ಉದಯವಾಣಿ eMagazine ಪ್ರಕಟಿತ ಲೇಖನ

    https://epaper.udayavani.com/c/67033468

    ಈಗಷ್ಟೇ ಶಾಂತ ಸರೋವರವಾದ ಮನದಂಗಳಕ್ಕೆ, ಸುನಾಮಿಯ ಅಲೆ ಎಬ್ಬಿಸಲು ಮತ್ತೆ ಆ ವ್ಯಂಗ್ಯ, ಚುಚ್ಚು ಮಾತಿನ ಬಾಣಗಳು ನನ್ನೆಡೆಗೆ ಶರವೇಗದಲ್ಲಿ ನುಗ್ಗುತ್ತಿದೆ. ಮತ್ತೆ ಮನಸ್ಸು ಕದಡಿ ಅಲ್ಲೋಲ ಕಲ್ಲೋಲವಾಗಿಸಲು ಹೊಂಚು ಹೂಡುತ್ತಿದೆ. ಆದರೆ ಇನ್ನು ಮುಂದೆ ನನ್ನೆಡೆಗೆ ಹರಿದುಬರುವ ಬಾಣಗಳ ಸುರಿಮಳೆಯು ನಾಟದಂತೆ ನನ್ನ ನಾನು ರಕ್ಷಿಸಿಕೊಳ್ಳಬಲ್ಲೆ. ಒಮ್ಮೆ ಕದನ ಶುರುವಾದರೆ ಅಂತ್ಯದ ಅರಿವಿಲ್ಲದೆ, ಯಾವ ಯುದ್ಧ ವಿರಾಮ, ಸೂರ್ಯಾಸ್ತದ ಬಿಡುವಿಲ್ಲದೆ ನಡೆಯುವ ನಿರಂತರ ಕಾದಾಟವಿದು ಎಂಬುದನ್ನು ಬಲ್ಲೆ ನಾನು. ಎಷ್ಟೋ ಬಾರಿ ಇಲ್ಲಿ ನಾನು ಸಾರಥಿಯೋ? ಸೈನಿಕನೋ? ಎಂಬ ಪರಿವಿಲ್ಲದೆ ಮನದ ರಣರಂಗದಲ್ಲಿ ಮನಸ್ಸು-ಬುದ್ಧಿಯ ಮಧ್ಯೆ ನಡೆದ ಸಂಗ್ರಾಮಕ್ಕೆ ಒಂಟಿ ಸಾಕ್ಷಿಯಾದವಳು ನಾನು. ಇವೆಲ್ಲದರಿಂದ ಗಟ್ಟಿಯಾದವಳು ನಾನು.

    ನನ್ನ ಭವಿಷ್ಯದ ಪಥವನೆಂದೂ ನಿರ್ಧರಿಸದವರ ಬರಿಯ ಕಟು, ಕೊಂಕು ಮಾತುಗಳ ಬಾಣಗಳಿಗೆ ಅಷ್ಟೊಂದು ಶಕ್ತಿಯೇ? ನನ್ನಂತರಂಗದಲ್ಲೊಂದು ಯುದ್ಧ ತರಂಗವ ಹುಟ್ಟು ಹಾಕಿ, ಅತಿವೇಗದಿ ಅಲೆಗಳ ಪ್ರಸರಣೆ ಇಡೀ ನನ್ನ ದೇಹವನ್ನಾವರಿಸುವಷ್ಟು? ಎಂದು ನನ್ನ ನಾನೇ ಬಹು ಬಾರಿ ಪ್ರಶ್ನಿಸಿ ಸೋತು, ಗೆದ್ದಿದ್ದೇನೆ. ಯುದ್ಧ ಕಾಳಗದಲ್ಲಿ ಕಹಳೆ ಊದಿದವನು ಕಿಡಿ ತಾಕಿಸಿ, ರಣರಂಗದಲ್ಲಿ ಕಾದಾಡದೇ, ತನ್ನ ಪಾತ್ರವ ಕಳಚಿ ಮುಂದೆ ನಡೆದರೂ; ನನ್ನ ಹುಚ್ಚು ಮನಸ್ಸಿನ್ನೂ, ಮತ್ತೆ ಮತ್ತೆ ಆ ಕಿಡಿಗೆ ಗಾಳಿ ಸೋಕಿಸಿ, ಬೆಂಕಿಯ ಕೆನ್ನಾಲಿಗೆಯು ನನ್ನಾವರಿಸುವಂತೆ ಮಾಡಿದ್ದನ್ನು ಅರಿತು ಎಚ್ಚೆತ್ತಿದ್ದೇನೆ.

    ಎಲ್ಲಾ ಹೆಜ್ಜೆಗಳಲ್ಲೂ ತಮ್ಮದೊಂದು ಕಲ್ಲು ಎಸೆದು, ಕೆದಕಿ-ಕೆದಕಿ ಕಾಳಗಕ್ಕೆ ಇಳಿಯುವವರನ್ನು ಕಂಡಿರುವೆ ನಾನು. ಶ್ರಮದಿಂದ ಗೆದ್ದು, ಎದ್ದು ನಿಂತಾಗ ಅವಳೇನು ಗೆದ್ದಿಲ್ಲ; ಅವಳೊಂದಿಗೆ ಇರುವವರು ಗೆಲ್ಲಿಸಿ, ನಿಲ್ಲಿಸಿದ್ದಾರೆಂದವರಿದ್ದಾರೆ. ಹಾಗೆಯೇ ಕುಸಿದು ಬಿದ್ದಾಗ, ನಿಲ್ಲಲೂ ಶಕ್ತಿ ಇಲ್ಲದವಳು ಇನ್ನೇನು ಮಾಡ್ಯಾಳು? ಎಂದಂತಹ ನೂರಾರು ಮಾತುಗಳು ನನ್ನನಿಂದು ಯುದ್ಧ ಭೂಮಿಯಲ್ಲಿ ತಲೆಯೆತ್ತಿ, ಎದೆಯೊಡ್ಡಿ ನಿಲ್ಲುವಂತೆ ಮಾಡಿದೆ. ಈ ಸಮಾಜದ ಚೌಕಟ್ಟಿನಲ್ಲಿ ನಾನಿದ್ದ ಮೇಲೆ ಎಲ್ಲಾ ತರಹದ ಬಾಣಗಳ ಪ್ರಯೋಗ ನಿಶ್ಚಿತ. ಹಾಗಂತ ಬೆಚ್ಚಿ ಪಲಾಯನ ಮಾಡಿ ಅವಿತು ಕೂತರೆ, ಅದು ಕದನ ವಿರಾಮಕ್ಕೆ ಉತ್ತರವಲ್ಲ. ಬದುಕಿನ ಪ್ರತಿ ಹೆಜ್ಜೆ ಹೋರಾಟವಾಗಿರುವುದರಿಂದ ಎಲ್ಲಾ ಸನ್ನಿವೇಶಗಳು ಒಂದಿಲ್ಲೊಂದು ವಿಷಯಗಳನ್ನು ಕಲಿಸಿಕೊಟ್ಟಿದೆ. ನನ್ನ ಭಾವನೆಗಳು, ನಿರ್ಧಾರಗಳು ಇಂದು ನನ್ನ ಹಿಡಿತದಲ್ಲಿದೆ. ಹಾಗಾಗಿ ಯಾವ ಅಥವಾ ಯಾರ ಬತ್ತಳಿಕೆಯ ಬಾಣಗಳು ನನ್ನೊಳಗೆ ಇನ್ಯಾವ ಅಲೆಗಳ ಉಗಮದ ಬಿಂದುವಾಗಲು ಆಸ್ಪದವಿಲ್ಲ. ಇದರಿಂದ ಮುಂದಿನ ಎಂತಹುದೇ ಸಂಗ್ರಾಮದಲ್ಲೂ ಗೆಲುವು ನನ್ನದೇ ಎಂಬ ಭವಿಷ್ಯವಾಣಿ ಧೈರ್ಯದಿಂದ ಹೇಳಬಲ್ಲೆ.

  • ಹಸಿವು

    “ಇಲ್ಲಾ ಆಂಟಿ ಹೊಟ್ಟೆ ಫುಲ್ ಆಗಿದೆ! ಸಾಕು, ಸಾಕು..”

    “ಇದೇನು ನೀನು ಇಷ್ಟು ಕಮ್ಮಿ ತಿನ್ನೋದು, ಇನ್ನೊಂದ್ ಸ್ವಲ್ಪ ತಿನ್ನು. ನೀನು ಬರೋದೇ ಅಪರೂಪ ನಮ್ ಮನೆಗೆ.”

    “ಇಲ್ಲ ಅಂಟಿ ಇನ್ನು ಸ್ವಲ್ಪ ತಿನ್ನೋಕು ಜಾಗ ಇಲ್ಲ ಹೊಟ್ಟೆಲಿ.” ಮಾಮೂಲಾಗಿ ಯಾರಾದರೂ ಅತಿಥಿಗಳು ಬಂದಾಗ ಅಥವಾ ನಾವು ಯಾರದ್ದಾದರೂ ಮನೆಗೆ ಹೋದಾಗ, ಈ ತರಹದ ಸಂಭಾಷಣೆಗಳು ಕೇಳ್ತಾನೆ ಇರ್ತೀವಿ.

    ಅದೇ ರೀತಿ, “ಅಮ್ಮ ಊಟ ಮಾಡಿದೆ ಎರಡು ದಿನ ಆಯ್ತು ಏನಾದ್ರೂ ತಿನ್ನೋಕ್ ಇದ್ರೆ ಕೊಡಿ.”

    “ಹೋಗಿ, ಹೋಗಿ ಮುಂದೆ ಹೋಗಿ.. ಏನು ಇಲ್ಲ”

    “ಇಲ್ಲಮ್ಮ ಏನಾದ್ರೂ ಕೊಡಿ, ತಂಗಳು ಆದರೂ ಪರವಾಗಿಲ್ಲ ತುಂಬಾ ಹಸಿವು, ತಾಳಲಾರದ ಹಸಿವು” ಇದು ಕೂಡ ಕೇಳ್ತಾ ಇರ್ತೀವಿ ಅಲ್ವಾ?

    ಈ ಎರಡು ಸನ್ನಿವೇಶದಲ್ಲಿ ನಾವು ನೋಡಬಹುದಾದ ಸಾಮಾನ್ಯ ಅಂಶ ಎಂದರೆ ಹೊಟ್ಟೆ. ಒಂದು ಕಡೆ ತುಂಬಿದ ಹೊಟ್ಟೆಗೆ ಇನ್ನು ತುಂಬಿಸಲು ಜಾಗದ ಕೊರತೆ. ಇನ್ನೊಂದೆಡೆ ಖಾಲಿ ಹೊಟ್ಟೆಗೆ ಚೂರು-ಪಾರಾದರೂ ಸೇರಿಸಿಕೊಳ್ಳುವ ಚಿಂತೆ. ನಾವು ಯಾವಾಗಲೂ ಹೊಟ್ಟೆ ತುಂಬಿದವರನ್ನೇ ಮತ್ತೆ ಮತ್ತೆ ತಿನ್ನಲು ಒತ್ತಾಯಿಸುವುದರಲ್ಲಿ ಏನು ಅರ್ಥವಿದೆ? ಅದರ ಬದಲು ಇನ್ನೆಲ್ಲೋ ಅವಶ್ಯಕತೆ ಇರುವವರಿಗೆ ನಾವು ನೀಡಲು ಯೋಚಿಸುವುದಿಲ್ಲ ಯಾಕೆ?

    ಹೇಳ್ತಾರಲ್ಲ ಹಸಿದವರಿಗೆ ಗೊತ್ತು ಅನ್ನದ ಬೆಲೆ ಅಂತ. ಹೊಟ್ಟೆ ತುಂಬ ಊಟ ಆದ್ಮೇಲೂ, ಇನ್ನೂ ‘ಒಂದು ಸ್ವೀಟು, ಇಲ್ಲಾಂದ್ರೆ ಒಂದು ಸ್ವೀಟ್ ಬೀಡನೋ ತಿಂದಿದ್ರೆ ಚೆನ್ನಾಗಿರುತ್ತಿತ್ತು’ ಅಂತಾರಲ್ಲ! ಅದಲ್ಲ ಹಸಿವು. ಹಸಿವಾರಿಸಲು ಖಾಲಿ ಹೊಟ್ಟೆಯಲ್ಲಿ ತಣ್ಣಗಿನ ನೀರು ಕುಡಿದಾಗ, ನರನಾಡಿಯಲ್ಲಿ ನೀರು ಹರಿದುಹೋಗುವ ಅನುಭವ ಅರಿಯುತ್ತಲ್ಲ. ಅದು ಹಸಿವು. ಪಾಪ, ಹಸಿವಿನಲ್ಲಿ ಎಷ್ಟು ಅಂತ ನೀರು ಕುಡಿಯೋಕೆ ಆಗುತ್ತೆ. ನೀರು ನಿಲ್ಲಲ್ಲ. ಹರಿದು ಹೋಗ್ತಾ ಇರುತ್ತೆ. ಆಮೇಲೆ.. ಮತ್ತದೇ ಹಸಿವು ಕಾಡುತ್ತೆ.

    “ಯಾಕೋ ಇವತ್ತು ಬಾಕ್ಸ್ ಗೆ ಹಾಕಿದ್ದ ತಿಂಡಿ ತಿಂದಿಲ್ಲ.”

    “ಇಲ್ಲಾ ಅಮ್ಮ, ನನ್ನ ಫ್ರೆಂಡ್ ಬರ್ತಡೇ ಪಾರ್ಟಿ ಇತ್ತು. ಹಾಗಾಗಿ ಅಲ್ಲೇ ಊಟ ಮಾಡಿದೆ. ನೀನು ಕೊಟ್ಟ ಬಾಕ್ಸ್ ಹಾಗೆ ಉಳಿದು ಹೋಯಿತು.”

    “ಅಹಂಕಾರ ನಿನಗೆ. ಊಟ ವೇಸ್ಟ್ ಮಾಡ್ತೀಯಾ. ಊಟದ ಬೆಲೆ ಗೊತ್ತಿಲ್ಲ. ಮುಂಚೆನೇ ಹೇಳಿದ್ರೆ ಬಾಕ್ಸ್ ಕಳಿಸ್ತಾನೆ ಇರಲಿಲ್ಲ ನಾನು.”

    “ಇರ್ಲಿ ಬಿಡು, ಒಂದು ಬಾಕ್ಸ್ ಹಳಸಿದ್ದಕ್ಕೆ ಯಾಕಿಷ್ಟು ಬೈತಿಯಾ?”

    ಅಮ್ಮ ಕೊಟ್ಟ ಬಾಕ್ಸ್ ನ ಪಾರ್ಟಿಗೆ ಹೋಗೋ ಉತ್ಸಾಹದಲ್ಲಿ, ಹಾಗೆ ಉಳಿಸಿ, ಹಳಸಿ ಮನೆಗೆ ತರೋ ಬದಲು, ಅಲ್ಲಿ ಕಾಲೇಜ್ ಹತ್ತಿರ ಯಾರಾದ್ರೂ ಹಸಿದವರಿಗೆ ಕೊಡಬಹುದಲ್ಲಾ. ಆದರೆ ಎಷ್ಟೋ ಜನ ಕೊಡಲ್ಲ. ಯಾಕೆಂದರೆ ಯಾವಾಗಲೂ ಮೋಜು ಮಸ್ತಿಯ ಹುಮ್ಮಸ್ಸಿನಲ್ಲಿ ಇರುವವರಿಗೆ ಹಸಿವೆಯ ಬೆಲೆ ಹೇಗೆ ಅರಿಯುತ್ತದೆ?

    ಹಲವು ಬಾರಿ ನಾವು ಸಮಾರಂಭಗಳಿಗೆ ಹೋದಾಗ, ತಮ್ಮ ಅಗತ್ಯಕ್ಕಿಂತ ಹೆಚ್ಚು ತಮ್ಮ ತಮ್ಮ ಎಲೆಗಳಿಗೆ ಬಡಿಸಿಕೊಂಡು, ಯಾವುದನ್ನೂ ಎರಡು ತುತ್ತಿಗಿಂತ ಹೆಚ್ಚು ತಿನ್ನದೆ ಹಾಗೆ ಎಸೆಯುವ ಎಷ್ಟೋ ಜನರನ್ನು ನೋಡಿರುತ್ತೇವೆ. ಅವರ ಹೊಟ್ಟೆಗೆ ಸೇರುವುದಕ್ಕಿಂತ ಹೆಚ್ಚಿನ ಭಾಗದಷ್ಟು ಊಟ ತಿಪ್ಪೆ ಸೇರುತ್ತದೆ. ಈ ರೀತಿ ಮಾಡುವುದು ನಾವು ಅನ್ನಪೂರ್ಣೇಶ್ವರಿ ಗೆ ಮಾಡುವ ಅವಮಾನ ಅಲ್ಲದೆ ಇನ್ನೇನು?

    “ಬೇಗ ಮುಖ ತೊಳೆದು ಬಾ, ನಿನಗೆ ಇಷ್ಟವಾದ ಪಾಯಸ, ಒಬ್ಬಟ್ಟು ಎಲ್ಲಾ ಮಾಡಿದ್ದೆ.”

    “ಏನಮ್ಮ! ಎಷ್ಟು ಸಲ ಹೇಳಿದೀನಿ ಸ್ವೀಟ್ ಎಲ್ಲಾ ಮಾಡಬೇಡ. ನಾನು ಡಯಟ್ ಅಲ್ಲಿದೀನಿ. ಅದನ್ನೆಲ್ಲ ತಿನ್ನಲ್ಲ. ನಿನಗೆ ಗೊತ್ತಿದೆ ತಾನೇ.”

    “ಗೊತ್ತಿದೆ, ಆದರೆ ಮನಸ್ಸು ಕೇಳಬೇಕಲ್ವಾ. ಬೆಳೆಯೊ ಮಗಳು ಹೊಟ್ಟೆತುಂಬಾ ತಿನ್ನಲಿ, ದಷ್ಟಪುಷ್ಟವಾಗಿ ಇರಲಿ, ಅಂತ ಆಸೆ.” ಹೀಗೆ ತಾಯಿ ಮಗಳ ಸಂಭಾಷಣೆ ಅನೇಕ ಮನೆಗಳಲ್ಲಿ ನಡೆಯುತ್ತದೆ. ಇದು ಇನ್ನೊಂದಿಷ್ಟು ಜನರ ಪಾಡು. ತಿನ್ನೋಕೆ ಇದ್ದು, ತೂಕ ಹೆಚ್ಚಾಗುವ ಚಿಂತೆ. ಕೊಬ್ಬು ಕರಗಿಸುವವರ ಸಮೂಹ ಒಂದು ಕಡೆ. ಮೈಯಲ್ಲಿ ಮಾಂಸವೇ ಇಲ್ಲದೆ ಮೂಳೆಗಳದ್ದೇ ಸಾಮ್ರಾಜ್ಯ ಇನ್ನೊಂದು ಕಡೆ.

    ಬಡತನದಲ್ಲಿ ಹೊಟ್ಟೆಯ ಹಸಿವು. ಸಿರಿತನದಲ್ಲಿ ಹಣ, ಮೋಜು-ಮಸ್ತಿ, ದೇಹ ಸೌಂದರ್ಯ ಕಾಪಾಡಿಕೊಳ್ಳೊದು ಇತ್ಯಾದಿಗಳ ಹಸಿವು. ಒಟ್ಟಿನಲ್ಲಿ ಈ ಪ್ರಪಂಚದಲ್ಲಿ ಎಲ್ಲರೂ ಒಂದಿಲ್ಲೊಂದು ತರಹದ ಹಸಿವಿನಲ್ಲಿ ಸದಾ ಒದ್ದಾಡುತ್ತಾ ಇರುತ್ತಾರೆ. ಆದರೆ ನನ್ನ ಮಟ್ಟಿಗೆ ಹೊಟ್ಟೆಯ ಹಸಿವು ಎಲ್ಲಕ್ಕಿಂತ ದೊಡ್ಡದು. ಹಸಿವಿನಿಂದ ಸಾಯುವುದು ದೊಡ್ಡ ಅನ್ಯಾಯ. ಅದ್ಯಾಕೆ ಆ ದೇವರು ಹುಟ್ಟಿಸಿದವನಿಗೆ ಹುಲ್ಲು ಹಾಕದೆ ಸಾಯಿಸುತ್ತಾನೋ ಎಂದುಕೊಳ್ಳುವ ಬದಲು, ನಾವು ನಮ್ಮ ಕೈಲಾದ ಮಟ್ಟಿಗೆ ಅವರ ಹಸಿವನ್ನು ಬರಿಸೋಣ. ಹಸಿದವರಿಗಾಗಿಯೇ ಅಡುಗೆ ಮಾಡಿ ಬಡಿಸುವವರು ಶ್ರೇಷ್ಠರು. ಪ್ರಪಂಚದಲ್ಲಿ ಈ ಶ್ರೇಷ್ಠ ಕೆಲಸ ಎಷ್ಟೋ ಜನರು ಮಾಡುತ್ತಿದ್ದಾರೆ. ಆ ಮಹಾನುಭಾವರಿಗೆ ನನ್ನದೊಂದು ನಮಸ್ಕಾರಗಳು. ನಮಗೆ ಅಷ್ಟೆಲ್ಲಾ ಮಾಡಲು ಸಾಧ್ಯವಾಗದಿದ್ದರೂ, ಕನಿಷ್ಠಪಕ್ಷ ನಾವು ಆಹಾರವನ್ನು ವೇಸ್ಟ್ ಮಾಡದೆ, ನಮ್ಮ ಕೈಲಾದಷ್ಟು ಹಸಿವನ್ನು ತಣಿಸೋಣ. ಒಂದೊಂದು ಅಗಳಿನ ಹಿಂದಿನ ಶ್ರಮಕ್ಕೆ ಬೆಲೆ ಕಟ್ಟೋಣ.

  • ಬಾರದ ನಾಳೆಯ ಬಲ್ಲವರಾರು

    ಇಂದ್ಯಾಕೆ ಹಾಳು ಮಾಡುವೆ,

    ಇನ್ನೂ ಕಾಣದ ನಾಳೆಗೆ.

    ಪ್ರಸ್ತುತವ ಪ್ರೀತಿಸಲು ಕಲಿಯದೆ,

    ಪರಿತಪಿಸಿದರೇನು ಫಲ ಭವಿಷ್ಯವಾಣಿಗೆ.

    ಜೇನಂತ ಜನರು ಜೊತೆಯಲ್ಲೇ ಇರಲು,

    ಜೋತೇಕೆ ಬಿದ್ದಿರುವೆ ಜಿಗುಪ್ಸೆ, ಜಾಡಿಗೆ.

    ಕೈಲಿರುವ ಕೂಸು ನಗುವಾಗ ಕಣ್ಮುಚ್ಚಿ,

    ಕಣ್ ಕಾಣದ ಕ್ಷಣಗಳಿಗೆ ಕೊರಗದಿರು ಈ ಬಗೆ.

  • ಸಾಫ್ಟವೇರ್ ಲೈಫು

    ಹಳೆ ಬೇರನು ತೊರೆದು

    ಹೊಸ ಬಂಧಕ್ಕೆ ಬೆಸೆದು

    ಹಲವು ಮೈಲಿಯ ಕಳೆದು

    ಸಾಧನೆಯ ಕದವ ತಟ್ಟಿ

    ಬಣ್ಣಬಣ್ಣದ ಕನಸ ಕಟ್ಟಿ

    ಸೇರಿದ್ದು ವರ್ಣ ರಹಿತ ಬದುಕಿಗೆ

    ಎಲ್ಲವೂ ಕೃತಕ, ಎಲ್ಲೆಲ್ಲೂ ಕಾಂಕ್ರೀಟು

    ಗಂಧದ ಘಮ, ಶ್ರೀಗಂಧಕ್ಕೆ ಸೇರಿಲ್ಲ

    ಚೆಂದದ ಸುಮ, ಸುಗಂಧವ ಬೀರುತ್ತಿಲ್ಲ.

    ಹಳೆ ಬೇರು ಮತ್ತೆ ಸೆಳೆಯುತ್ತಿದೆ,

    ಹೊಸ ಬಂಧ ಉಸಿರು ಕಟ್ಟುತ್ತಿದೆ.

    ಎಲ್ಲಾ ಬಂಧ- ಭಾವವ ಕಳಚಿ,

    ಮಾಂಸ ಹೊದಿಕೆಯ ಮಡಚಿ,

    ತಾಯ ಉದರದಲ್ಲಿ ಮಗುವಾಗಿ

    ಮತ್ತೆ ಮೆತ್ತಗೆ ಮಲಗಿ,

    ಹೊಸ ದಾರಿ, ಹೊಸ ಕನಸ

    ರಂಗೋಲಿ ಬಿಡಿಸುವಾಸೆ.